25 October 2011

ಈ ಅಬ್ಬರ ಬೇಕೆ?



ಪಕ್ಕದ ಮನೆಯ ಪುಟಾಣಿ ಹುಡುಗನಿಗೆ ಎರಡು ದಿನಗಳಿಂದ ಖುಷಿಯೋ ಖುಷಿ. ಕಾರಣ, ಅವನ ಮನದಿಚ್ಛೆಯ ಪಟಾಕಿಗಳು ಇಂದವನ ಕೈಸೇರಿವೆ. ಉಪವಾಸ ಸತ್ಯಾಗ್ರಹಾದಿಗಳು ರಾಷ್ಟ್ರಮಟ್ಟದ ರಾಜಕಾರಣಿಗಳ ಮೇಲೆ ಪ್ರಭಾವ ಬೀರದಿದ್ದರೂ ತನ್ನ ಮನೆಯಲ್ಲಿ ಖಂಡಿತಾ ಪರಿಣಾಮಕಾರಿಯಾಗುತ್ತದೆಂಬ ಅವನ ಅಚಲ ನಂಬಿಕೆ ಇಂದು ಮತ್ತಷ್ಟು ಗಟ್ಟಿಯಾಗಿತ್ತು. ನಾಕು ದಿನಗಳಿಂದ ಹಿಡಿದ ಹಟ ಸಾರ್ಥಕವಾಗಿತ್ತು. ರಂಗು ರಂಗಿನ ಢಂ ಢಮಾರೆನ್ನುವ ಹತ್ತು ಹಲವು ಬಗೆಯ ಪಟಾಕಿಗಳು ಪುಟ್ಟ ಕೈಯಿಂದ ಬೆಂಕಿ ಕಾಣುವ ತವಕದಿ ಕಾದು ಕುಳಿತಿವೆ.

ಹಬ್ಬಗಳ ರಾಜ ಬಂದನೆಂದಾಗ, ದೀಪಗಳಷ್ಟೇ ಗಾಢವಾಗಿ ಪಟಾಕಿಗಳ ಅಬ್ಬರವೂ ನೆನಪಾಗುತ್ತದೆ. ಮಕ್ಕಳಿಗಂತೂ ದೀಪಾವಳಿಯೆಂದರೆ ಅದು 'ಪಟಾಕಿ' ಅಷ್ಟೇ ಎಂಬ ಭಾವನೆ ಬೇರೂರುವಂತಾಗಿದೆ. ಕಾರಣ ಮತ್ಯಾರೂ ಅಲ್ಲ, ನಾವೇ. ಮಗುವಿಗಿನ್ನೂ ಮಾತು ಬರುವ ಮೊದಲೇ ಪಟಾಕಿಯ ಸದ್ದು ಪರಿಚಿತವಾಗುವಂತೆ ಮಾಡುತ್ತೇವೆ ನಾವು. ಅದು ಬೆಳೆದಂತೆ ಪಟಾಕಿಗಾಗಿ ಹಟ ಮಾಡುತ್ತದೆ. ಅದರಿಂದಾಗಬಹುದಾದ ಅನಾಹುತಗಳ ಬಗ್ಗೆ ವಿವೇಚಿಸುವಷ್ಟು ದೊಡ್ಡ ಮನಸ್ಸೇನೂ ಅದರದಾಗಿರುವುದಿಲ್ಲ ತಾನೆ?
ಮಕ್ಕಳಿಗೆ ಹಬ್ಬದ ಮಹತ್ವ, ಹಿನ್ನೆಲೆ ಇತ್ಯಾದಿಗಳನ್ನು ವಿವರಿಸುವ ಬದಲು, ಹಣವನ್ನೇ ಸುಡುವುದನ್ನು ಹೇಳಿಕೊಡುತ್ತೇವೆ. ಲಕ್ಷ್ಮಿ ಪೂಜೆ ಮಾಡಿಯಾದರೂ ಏನು ಪ್ರಯೋಜನ ಹೇಳಿ?
ಪ್ರತಿ ವರ್ಷ ಪಟಾಕಿ ಸಿಡಿತದಿಂದಾಗಿ ಗಾಯಗೊಂಡವರ, ಕಣ್ಣು-ಕೈ-ಕಾಲು ಕಳಕೊಂಡವರ ಆಕ್ರಂದನ ಹೆಚ್ಚಾಗುತ್ತಲೆ ಇದೆಯಷ್ಟೆ. ಕೆಟ್ಟ ಮೇಲೂ ಬುದ್ಧಿ ಕಲಿವ ಬುದ್ಧಿಯೂ ನಮಗಿಲ್ಲದಾಗಿಹೋದ್ದು ವಿಪರ್ಯಾಸ..!  

08 March 2011

ಮಹಿಳಾ ದಿನ

"ಅಮ್ಮಾ.. ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು..
ಮಿಡುಕಾಡುತಿರುವೆ ನಾನು..."
ಕವಿ ಬಿ.ಆರ್.ಲಕ್ಷ್ಮಣ್ ರಾವ್ ಅಮ್ಮನ ಬಗ್ಗೆ ಎಷ್ಟು ಚೆನ್ನಾಗಿ ಬರ್ದಿದಾರಲ್ವ..
ಅಮ್ಮ ಅಂದ್ರೆ ಮಮತೆಯ ಕಡಲು, ಅಮ್ಮ ಅಂದ್ರೆ ಪ್ರೇಮದಾಗರ, ಅಮ್ಮ ಅಂದ್ರೆ ಸಹನೆ, ತಾಳ್ಮೆ, ಅಮ್ಮ ಅಂದ್ರೆ ಎಲ್ಲವೂ...
ಹೌದು, ಅಮ್ಮನ ಬಗ್ಗೆ ನಾಕಾರು ಹಗುರ ಪದಗಳ ಮಿತಿಯಲ್ಲಿ ವಿಸ್ತರಿಸಿ ವಿವರಿಸೋದು ಕಷ್ಟ. ಇದ್ದಕ್ಕಿದ್ದ ಹಾಗೆ ಅಮ್ಮನ ಬಗ್ಗೆ ಬರೀಬೇಕು ಅಂತನ್ಸಿದ್ದು ಈ ವಿಶ್ವ ಮಹಿಳಾ ದಿನ ಅಂತಂದಾಗ. ಒಬ್ಬ ಪರಿಪೂರ್ಣ ಮಹಿಳೆ ಅಂದ್ರೆ ಆಕೆ 'ಅಮ್ಮ'ನೇ ಅಲ್ವ? ಹುಟ್ಟಿದಲ್ಲಿಂದ ಹಲವಾರು ಬದಲಾವಣೆಗಳಿಗೆ ಹೊಂದಿಕೊಂಡು ಬಾಳಿ-ಬಾಳಿಸಿದವಳವಳು.

ನಮ್ಗೆ ಪೆಟ್ಟಾದ್ರೆ ನಮ್ಗಿಂತ್ಲೂ ಹೆಚ್ಚು ನೋವಾಗೋದು ಅಮ್ಮನಿಗೆ. ನಾವು ಊಟ ಮಾಡ್ದೆ ಹೋದ್ರೆ ತಲೆನೋವಾಗೋದು ಅಮ್ಮನಿಗೆ. ನಾವು ಹುಷಾರಿಲ್ದೆ ಆದ್ರೆ ನಿದ್ದೆ ಬರ್ದಿರೋದು ಅಮ್ಮನಿಗೆ. ಜೀವನಪೂರ್ತಿ ಮನೆಯ-ಮಕ್ಕಳ ಬಗ್ಗೇನೇ ಆಲೋಚನೆ ಮಾಡೋ ಅಮ್ಮನಿಗೆ ಮಿಗಿಲಾದ ನಿಸ್ವಾರ್ಥ ಮನೋಭಾವ ಬೇರೆಲ್ಲಿದ್ದೀತು?

ಅಂಥ ಅಮ್ಮನಿಗೆ... ಅಂಥ ಅಮ್ಮನ ಹೃದಯವಂತಿಕೆಯಿರುವವರೆಲ್ಲರಿಗೆ ಮಹಿಳಾ ದಿನದ ಶುಭಾಶಯಗಳು.

13 January 2011

ಪುಟ್ಟಬಾಲೆಯ ಬಲಿಗೆ ಯಾವ ದೈವವದು ಒಲಿದೀತು?



ಹೇಳಿಕೇಳಿ ಇನ್ನೂ ಮೂರರ ಹರೆಯ. ಈ ಕ್ರೂರ ಪ್ರಪಂಚ ಏನು ಅಂತ ತಿಳಿಯೋ ಮೊದ್ಲೇ ಆ ಪುಟ್ಟ ಜೀವ ಇಹ ಲೋಕದ ಪ್ರಯಾಣ ಮುಗಿಸಿಯಾಗಿತ್ತು. ಆ ಎಳೆದೇಹ ಕಲ್ಲುಮುಳ್ಳುಗಳ ನಡುವೆ 'ಮೃತದೇಹ'ವಾಗಿ ಬಿದ್ದಿರೋದನ್ನು ನೋಡಿದ್ರೆ ಎಂಥವರಿಗೂ ಕಣ್ಣಲ್ಲಿ ನೀರು ಬಂದೀತು. ಕಂದನ ತುಂಟತನವನ್ನು, ಬಾಲಿಶ-ಚುರುಕು ಮಾತುಗಳನ್ನು ಕೇಳುತ್ತ ಖುಷಿ ಪಡ್ತಾ ಇದ್ದ ಅದರ ಅಪ್ಪ-ಅಮ್ಮನ ವೇದನೆಯದು ಅನಂತ. ನಿಷ್ಕಾರಣವಾಗಿ ಒಂದು ಮುಗ್ಧಜೀವ ಬಲಿಯಾಗಿ ಹೋಯ್ತಂದ್ರೆ ಯಾರಿಗೆ ತಾನೆ ದುಃಖವಾಗ್ಲಿಕ್ಕಿಲ್ಲ... ಆ ಪುಟಾಣಿ ಜೀವವನ್ನು ಬಲಿತಗೊಂಡು ಒಲಿಯುವ ಮನಸ್ಸು ಯಾವ ದೈವಕ್ಕೂ ಇರ್ಲಿಕ್ಕಿಲ್ಲ...


ಹೌದು ನಾನು ಹೇಳ್ತಾ ಇರೋದು, ಮೊನ್ನೆ ತಾನೆ ನಮ್ಮ ಮಂಗಳೂರಿನಲ್ಲಿ ವಾಮಾಚಾರದ ಭೂತಕ್ಕೆ 'ಬಲಿ'ಯಾದ ಪ್ರಿಯಾಂಕಾಳ ಬಗ್ಗೆ. ಒಂದು ದಿನ ಪೂರ್ತಿ 'ಬ್ರೇಕಿಂಗ್ ನ್ಯೂಸ್' ಆಗಿ ಮಾಧ್ಯಮಗಳಲ್ಲಿ ಬಿತ್ತರವಾದ ಆ ಸುದ್ದಿಯದ್ದು ಆಮೇಲೆ ಸುದ್ದಿಯೇ ಇಲ್ಲ. ಆಳುವ, ಕಾಯುವ ನಾಯಕರಿಗೆಲ್ಲ ಚುನಾವಣೆಯ ಬಿಸಿ. ಆ ಕುರಿತಾದ 'ಗಾಸಿಪ್'ಗಳಿಗೆ ಪ್ರಚಾರ ಕೊಡುವ ಭರಾಟೆಯಲ್ಲಿ ಮಾಧ್ಯಮಗಳಿಗೂ ಪುರುಸೊತ್ತಿಲ್ಲ.

ದೂರದ ಬಿಹಾರದಿಂದ ಇಲ್ಲಿ ಬಂದು ನೆಲೆಸಿದ ಆ ಕುಟುಂಬಕ್ಕೆ ನಮ್ಮ ಬಗ್ಗೆ ಎಂಥಾ ಕೆಟ್ಟ ಭಾವನೆ ಬಂದಿರ್ಬಹುದಲ್ಲ.. ನಮ್ಮೂರಿನ ಬಗೆಗಿನ ಆ ಕಪ್ಪು ಚುಕ್ಕೆ ಇನ್ನೆಂದೂ ಹೋಗ್ಲಿಕ್ಕಿಲ್ಲ.

ವಿಜ್ಞಾನ-ತಂತ್ರಜ್ಞಾನದಲ್ಲಿ ತೀವ್ರ ಪ್ರಗತಿ ಕಾಣ್ತಾ ಇರೋ ಈ ಹೈಟೆಕ್ ಶತಮಾನದಲ್ಲೂ ವಾಮಾಚಾರ, ನರಬಲಿ ಎಲ್ಲ ನಡೀತಿದೆ ಅಂದ್ರೆ ಏನರ್ಥ? ನಮ್ಮ ಮೂಲ ನಂಬಿಕೆಗಳ ಅರ್ಥವನ್ನು ಅನರ್ಥ ಮಾಡಿ ಮೂಢ ಆಚರಣೆಗಳನ್ನು ಈಗಲೂ ಪಾಲಿಸುವವ್ರಿಗೆ ಏನು ಹೇಳೋಣ? ಇನ್ನೂ ಚಿಗುರುತ್ತಿರೋ ಆ ಎಳೆ ಕುಡಿಯನ್ನು ಕೊಂದು ಹಾಕಿದ ಆ ವಿಕೃತ ಮನಸ್ಸು ಅದೆಷ್ಟು ಕಟುಕವಾಗಿರ್ಬಹುದಲ್ಲ..? ನಿಜವಾಗಿ ನೋಡಿದ್ರೆ, ಅವನಿಗೆ ನೇಣು ಶಿಕ್ಷೆಯೂ ಸಾಲದು! ಅವನೋ ಮುದುಕ. ನಮ್ಮ ನ್ಯಾಯಾಧಿಕರಣದಲ್ಲಿ ವಿಚಾರಣೆ-ವಿವರಣೆಗಳೆಲ್ಲ ಮುಗಿದು ತೀರ್ಪು ಬರುವ ಹೊತ್ತಿಗೆ ಆತ ಖಂಡಿತಾ ಪ್ರಾಕೃತಿಕವಾಗಿಯೇ ಸತ್ತು ಹೋಗಿರ್ತಾನೆ. ಮತ್ತೆಲ್ಲಿಯ ಶಿಕ್ಷೆ ಹೇಳಿ...

ತಪ್ಪಿತಸ್ಥ ಸಿಕ್ಕಿಹಾಕಿಕೊಂಡ ಮೇಲೆ ಅವರಿವರನ್ನೆಲ್ಲ ಕೊಲೆಯ ಭಾಗಿಗಳಾಗಿ ಮಾಡಹೊರಟ. ಆಸ್ತಿವಿವಾದವೋ ಮತ್ತೊಂದೋ ಕಾರಣಗಳು ಹಲವು. ಅಂತೂ ಎಳೆಚಿಗುರೊಂದು ಕಮರಿಹೋದದ್ದಂತೂ ಸತ್ಯ. ಅದನ್ನು ಕಣ್ಣಾರೆ ಕಂಡು ನಾವೆಲ್ಲ ಕೈಕಟ್ಟಿ ಕುಳಿತಿರ್ಬೇಕಾಗಿರೋದೂ ಅಷ್ಟೇ ಸತ್ಯ!