13 January 2011

ಪುಟ್ಟಬಾಲೆಯ ಬಲಿಗೆ ಯಾವ ದೈವವದು ಒಲಿದೀತು?



ಹೇಳಿಕೇಳಿ ಇನ್ನೂ ಮೂರರ ಹರೆಯ. ಈ ಕ್ರೂರ ಪ್ರಪಂಚ ಏನು ಅಂತ ತಿಳಿಯೋ ಮೊದ್ಲೇ ಆ ಪುಟ್ಟ ಜೀವ ಇಹ ಲೋಕದ ಪ್ರಯಾಣ ಮುಗಿಸಿಯಾಗಿತ್ತು. ಆ ಎಳೆದೇಹ ಕಲ್ಲುಮುಳ್ಳುಗಳ ನಡುವೆ 'ಮೃತದೇಹ'ವಾಗಿ ಬಿದ್ದಿರೋದನ್ನು ನೋಡಿದ್ರೆ ಎಂಥವರಿಗೂ ಕಣ್ಣಲ್ಲಿ ನೀರು ಬಂದೀತು. ಕಂದನ ತುಂಟತನವನ್ನು, ಬಾಲಿಶ-ಚುರುಕು ಮಾತುಗಳನ್ನು ಕೇಳುತ್ತ ಖುಷಿ ಪಡ್ತಾ ಇದ್ದ ಅದರ ಅಪ್ಪ-ಅಮ್ಮನ ವೇದನೆಯದು ಅನಂತ. ನಿಷ್ಕಾರಣವಾಗಿ ಒಂದು ಮುಗ್ಧಜೀವ ಬಲಿಯಾಗಿ ಹೋಯ್ತಂದ್ರೆ ಯಾರಿಗೆ ತಾನೆ ದುಃಖವಾಗ್ಲಿಕ್ಕಿಲ್ಲ... ಆ ಪುಟಾಣಿ ಜೀವವನ್ನು ಬಲಿತಗೊಂಡು ಒಲಿಯುವ ಮನಸ್ಸು ಯಾವ ದೈವಕ್ಕೂ ಇರ್ಲಿಕ್ಕಿಲ್ಲ...


ಹೌದು ನಾನು ಹೇಳ್ತಾ ಇರೋದು, ಮೊನ್ನೆ ತಾನೆ ನಮ್ಮ ಮಂಗಳೂರಿನಲ್ಲಿ ವಾಮಾಚಾರದ ಭೂತಕ್ಕೆ 'ಬಲಿ'ಯಾದ ಪ್ರಿಯಾಂಕಾಳ ಬಗ್ಗೆ. ಒಂದು ದಿನ ಪೂರ್ತಿ 'ಬ್ರೇಕಿಂಗ್ ನ್ಯೂಸ್' ಆಗಿ ಮಾಧ್ಯಮಗಳಲ್ಲಿ ಬಿತ್ತರವಾದ ಆ ಸುದ್ದಿಯದ್ದು ಆಮೇಲೆ ಸುದ್ದಿಯೇ ಇಲ್ಲ. ಆಳುವ, ಕಾಯುವ ನಾಯಕರಿಗೆಲ್ಲ ಚುನಾವಣೆಯ ಬಿಸಿ. ಆ ಕುರಿತಾದ 'ಗಾಸಿಪ್'ಗಳಿಗೆ ಪ್ರಚಾರ ಕೊಡುವ ಭರಾಟೆಯಲ್ಲಿ ಮಾಧ್ಯಮಗಳಿಗೂ ಪುರುಸೊತ್ತಿಲ್ಲ.

ದೂರದ ಬಿಹಾರದಿಂದ ಇಲ್ಲಿ ಬಂದು ನೆಲೆಸಿದ ಆ ಕುಟುಂಬಕ್ಕೆ ನಮ್ಮ ಬಗ್ಗೆ ಎಂಥಾ ಕೆಟ್ಟ ಭಾವನೆ ಬಂದಿರ್ಬಹುದಲ್ಲ.. ನಮ್ಮೂರಿನ ಬಗೆಗಿನ ಆ ಕಪ್ಪು ಚುಕ್ಕೆ ಇನ್ನೆಂದೂ ಹೋಗ್ಲಿಕ್ಕಿಲ್ಲ.

ವಿಜ್ಞಾನ-ತಂತ್ರಜ್ಞಾನದಲ್ಲಿ ತೀವ್ರ ಪ್ರಗತಿ ಕಾಣ್ತಾ ಇರೋ ಈ ಹೈಟೆಕ್ ಶತಮಾನದಲ್ಲೂ ವಾಮಾಚಾರ, ನರಬಲಿ ಎಲ್ಲ ನಡೀತಿದೆ ಅಂದ್ರೆ ಏನರ್ಥ? ನಮ್ಮ ಮೂಲ ನಂಬಿಕೆಗಳ ಅರ್ಥವನ್ನು ಅನರ್ಥ ಮಾಡಿ ಮೂಢ ಆಚರಣೆಗಳನ್ನು ಈಗಲೂ ಪಾಲಿಸುವವ್ರಿಗೆ ಏನು ಹೇಳೋಣ? ಇನ್ನೂ ಚಿಗುರುತ್ತಿರೋ ಆ ಎಳೆ ಕುಡಿಯನ್ನು ಕೊಂದು ಹಾಕಿದ ಆ ವಿಕೃತ ಮನಸ್ಸು ಅದೆಷ್ಟು ಕಟುಕವಾಗಿರ್ಬಹುದಲ್ಲ..? ನಿಜವಾಗಿ ನೋಡಿದ್ರೆ, ಅವನಿಗೆ ನೇಣು ಶಿಕ್ಷೆಯೂ ಸಾಲದು! ಅವನೋ ಮುದುಕ. ನಮ್ಮ ನ್ಯಾಯಾಧಿಕರಣದಲ್ಲಿ ವಿಚಾರಣೆ-ವಿವರಣೆಗಳೆಲ್ಲ ಮುಗಿದು ತೀರ್ಪು ಬರುವ ಹೊತ್ತಿಗೆ ಆತ ಖಂಡಿತಾ ಪ್ರಾಕೃತಿಕವಾಗಿಯೇ ಸತ್ತು ಹೋಗಿರ್ತಾನೆ. ಮತ್ತೆಲ್ಲಿಯ ಶಿಕ್ಷೆ ಹೇಳಿ...

ತಪ್ಪಿತಸ್ಥ ಸಿಕ್ಕಿಹಾಕಿಕೊಂಡ ಮೇಲೆ ಅವರಿವರನ್ನೆಲ್ಲ ಕೊಲೆಯ ಭಾಗಿಗಳಾಗಿ ಮಾಡಹೊರಟ. ಆಸ್ತಿವಿವಾದವೋ ಮತ್ತೊಂದೋ ಕಾರಣಗಳು ಹಲವು. ಅಂತೂ ಎಳೆಚಿಗುರೊಂದು ಕಮರಿಹೋದದ್ದಂತೂ ಸತ್ಯ. ಅದನ್ನು ಕಣ್ಣಾರೆ ಕಂಡು ನಾವೆಲ್ಲ ಕೈಕಟ್ಟಿ ಕುಳಿತಿರ್ಬೇಕಾಗಿರೋದೂ ಅಷ್ಟೇ ಸತ್ಯ!

14 August 2010

ಮಾಲ್‌ಗಳೆಂಬ ಮಾಯಾವಿಗಳು



 ದಿನಬಳಕೆಯ ಎಲ್ಲಾ ವಸ್ತುಗಳೂ ಸ್ವಚ್ಛ ಸುಂದರ ಸುಸಜ್ಜಿತವಾದ ಒಂದೇ ಸೂರಿನಡಿಯಲ್ಲಿ ಲಭ್ಯ. ಸಾವಿರಾರು ವಾಹನಗಳಿಗೆ ಅಚ್ಚುಕಟ್ಟಾದ ಪಾರ್ಕಿಂಗ್ ಸೌಲಭ್ಯ. ಮನೋರಂಜನೆಗೆ ಐಶಾರಾಮಿ ಚಿತ್ರಮಂದಿರಗಳು, ಆಟ, ಈಜಾಟಕ್ಕೂ ಅವಕಾಶ. ಹೊಟ್ಟೆ ಹಸಿವು ತಣಿಸಲು ಬಗೆ ಬಗೆಯ ರೆಸ್ಟೋರೆಂಟ್‌ಗಳು. - ಇವೆಲ್ಲ ಕೋಟಿಗಟ್ಟಲೆ ಬಂಡವಾಳ ಹೂಡಿ ಅದರ ದುಪ್ಪಟ್ಟು ಲಾಭ ಪಡೆವ ಶಾಪಿಂಗ್ ಮಾಲ್‌ಗಳ ಕಮಾಲ್! ಕಾಸಿದ್ದವ್ರಿಗೆ ಅದುವೇ ಕೈಲಾಸ!

೨೦೦೫ರಲ್ಲಿ ಭಾರತಕ್ಕೆ ಕಾಲಿರಿಸಿದ ಮಾಲ್‌ಗಳು ೨೦೦೯ರ ವೇಳೆಗೆ ನಾಲ್ಕುನೂರಕ್ಕೂ ಮೀರಿ ಬೆಳೆದು ನಿಂತಿವೆ.
ನಮ್ಮ ಬೆಂಗಳೂರಿನಲ್ಲಿ ಏಷ್ಯಾದಲ್ಲೇ ಅತೀ ದೊಡ್ಡ ಶಾಪಿಂಗ್ ಮಾಲ್ ಇದ್ಯಂತೆ. ಅಬ್ಬ ಎಷ್ಟು ಹೆಮ್ಮೆಯಿಂದ ಹೆಳ್ಕೊಳ್ತೇವೆ ನಾವು! ಆದ್ರೆ ಈ ಮಾಲ್‌ಗಳಿಂದಾಗಿ ಅದೆಷ್ಟು ಜನರ ಹೊಟ್ಟೆಗೆ ಏಟು ಬಿದ್ದಿರ್ಬಹುದು ಅಂತ ಯೋಚ್ನೆ ಮಾಡ್ತೇವಾ? ನೂರಾರು ಕಿರಾಣಿ ಅಂಗಡಿಗಳು, ತರಕಾರಿ ಗಾಡಿಗಳು, ಪುಟ್ಟ ಪುಟ್ಟ ಹೋಟೆಲ್‌ಗಳು ವ್ಯಾಪಾರವಿಲ್ದೆ ಬಸವಳೀತಾ ಇವೆ. ಇದ್ರ ಪರೋಕ್ಷ ಹೊಡೆತ ರೈತರ ಮೇಲೂ ಆಗುತ್ತೆ, ಖಂಡಿತ. ಒಂದಷ್ಟು ಜನ್ರಿಗೆ ಉದ್ಯೋಗಾವಕಾಶವೇನೋ ಸಿಕ್ಕಿರ್ಬಹುದು. ಆದ್ರೆ ಇನ್ನುಳಿದವ್ರ ಗತಿ?!

ಬಿಡುವಿಲ್ಲದ ದುಡಿಮೆಯ ಈ ಕಾಲದಲ್ಲಿ ಜನರು ಬಯಸೋದೂ ಇಂಥದ್ದನ್ನೇ. ಎಲ್ಲವೂ ಒಂದೇ ಕಡೆ ಸಿಗೋ ವ್ಯವಸ್ಥೇನೆ ಒಳ್ಳೆದು, ಸುಮ್ನೆ ಅಲೆಯೋ ಕೆಲ್ಸ ಇಲ್ವಲ್ಲ ಅಂತ. ಮತ್ತೆ ಕೆಲವ್ರಿಗೆ ಶಾಪಿಂಗ್ ಮಾಲ್‌ಗಳಲ್ಲಿ ಶಾಪಿಂಗ್ ಮಾಡೋದು ಒಂದು ಪ್ರತಿಷ್ಠೆ. ಒಟ್ಟಿನಲ್ಲಿ ಇಂಥ ಒಂದು ಬೆಳವಣಿಗೆಗೆ ನಾವೇ ಮೂಲ ಪ್ರೇರಣೆ, ಅಲ್ವಾ?

ನಮ್ಮ ಊರಲ್ಲೆಲ್ಲ ವಾರಕ್ಕೊಮ್ಮೆ ಸಂತೆ ನಡಿಯುತ್ತೆ. ಅಲ್ಲೂ ಹೀಗೇನೇ, ದಿನಬಳಕೆಗ್ ಬೇಕಾದ್ದೆಲ್ಲ ಸಿಗುತ್ತೆ. ನ್ಯಾಯಯುತವಾದ ಬೆಲೆಗೆ, ಯಾರಿಗೂ ಏನೂ ಅನ್ಯಾಯವಾಗದ ರೀತಿಯಲ್ಲಿ. ಅದು ವಾರಕ್ಕೊಮ್ಮೆ ನಡಿಯೋದು. ಆದ್ರೆ ಇದು ಪ್ರತಿ ದಿನವೂ. ಅಲ್ಲಿ ರೈತರೇ ಅಥವಾ ಉತ್ಪಾದಕರೇ ಸ್ವತಃ ಬಂದು ತಮ್ಮ ವಸ್ತುಗಳನ್ನು ಮಾರ್ತಾರೆ. ಇಲ್ಲಿ ಕೇವಲ 'ಬ್ರಾಂಡೆಡ್' ಕಂಪೆನಿಗಳು ಮಾತ್ರ. ಎಷ್ಟು ಅಜಗಜಾಂತರ ಅಲ್ವಾ?       

ಮಾಲ್‌ಗಳನ್ನು ಮಾಡ್ಲಿ ಪರ್ವಾಗಿಲ್ಲ. ಆದ್ರೆ ಅಲ್ಲಿ ನಮ್ಮವರಿಗೇನೆ ಅವಕಾಶ ಕೊಡ್ಬೇಕು. ದೊಡ್ಡ ದೊಡ್ಡ ವಿದೇಶಿ ಕಂಪೆನಿಗಳನ್ನು ಕಡಿಮೆ ಮಾಡಿ, ಹೊರಗಡೆ ಸಣ್ಣ ಪುಟ್ಟ ವ್ಯಾಪಾರ ಮಾಡುವ ನಮ್ಮವರನ್ನೇ ಒಳಕರೀಬೇಕು.. ಹಾಗಾದಾಗ ಆ ಅಭಿವೃದ್ಧಿಗೂ ಒಂದು ಅರ್ಥ ಬರುತ್ತೆ. ಏನಂತೀರಿ?

17 June 2010

ಇದು ಯಾವ ನ್ಯಾಯ?



೧೯೮೪, ಡಿಸೆಂಬರ್ ೨ರ ಮಧ್ಯರಾತ್ರಿ. ಭಾರತದ ಮಧ್ಯಭಾಗದಲ್ಲಿರುವ ಮಧ್ಯಪ್ರದೇಶದ ರಾಜಧಾನಿ ಭೋಪಾಲ್. ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ಉದ್ಯಮಿಗಳ ವರೆಗೆ ಎಲ್ಲರೂ ದಣಿದು ಮನೆಸೇರಿ ಮಲಗಿದ್ರು. ಪುಟ್ಟ ಪುಟಾಣಿ ಮಕ್ಕಳೆಲ್ಲ ಸಿಹಿನಿದ್ದೆಯಲ್ಲಿ ಸವಿಗನಸು ಕಾಣ್ತಾ ಇದ್ರು. ಆಗಲೇ ಸುಳಿ ಸುಳಿದು ಬಂದಿತ್ತು, ಸದ್ದಿಲ್ಲದೆ ಸೋರಿಹೋದ ವಿಷಾನಿಲ ಮೃತ್ಯುರೂಪದಲ್ಲಿ! ಒಂದಲ್ಲ ಎರಡಲ್ಲ ಹದಿನೈದು ಸಾವಿರ ಜೀವಗಳು! ಮರುದಿನದ ಬೆಳಗನ್ನು ನೋಡದೇ ಕಣ್ಮುಚ್ಚಿದವು! ಮತ್ತಷ್ಟು ಸಾವಿರ ಜನ ಅಂಗಾಂಗ ಊನಗೊಂಡು ಹೀನಾಯ ಸ್ಥಿತಿ ತಲುಪಿದ್ರು. ಅದರ ಪರಿಣಾಮದ ಖಾಯಿಲೆಗಳು ಈಗಲೂ ಅನುವಂಶಿಕವಾಗಿ ಬಂದು ಕಾಡ್ತಾ ಇವೆ.
ಇಷ್ಟೆಲ್ಲ ಅನಾಹುತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಪೆಸ್ಟಿಸೈಡ್ಸ್ ಕಾರ್ಖಾನೆಯ ಮುಖ್ಯಸ್ಥವರ್ಗದವರಿಗೆ ಸಿಕ್ಕಿದ್ದು ಕೇವಲ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ೧ ಲಕ್ಷ ರೂ ದಂಡ. ಅದೂ ೨೪ ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ!
ಹದಿನೈದು ಸಾವಿರ ಜೀವಗಳ ಬೆಲೆ ಇಷ್ಟೇನಾ??! 

ಶಿಕ್ಷೆ ಘೋಷಣೆಯಾದ ತಕ್ಷಣವೇ ಶಿಕ್ಷೆಯಾದ ಎಲ್ಲರೂ ಜಾಮೀನಿಗೆ ಅರ್ಜಿ ಸಲ್ಲಿಸಿ, ೨೫೦೦೦ ರೂ ಭದ್ರತಾ ಮುಚ್ಚಳಿಕೆ ಪಡ್ಕೊಂಡು ಜಾಮೀನು ಪಡ್ಕೊಂಡೇ ಬಿಟ್ರಂತೆ!
ಇದೆಲ್ಲ ಬದಿಗಿರ್ಲಿ. ದುರಂತಕ್ಕೆ ಪ್ರಮುಖ ಕಾರಣಕರ್ತನಾದ ವಾರೆನ್ ಆ‍ಯ್ಂಡರ್‌ಸನ್ ವಿರುದ್ಧ ಯಾವುದೇ ಪ್ರಸ್ತಾಪ ಆಗೇ ಇಲ್ಲ!
ಆತ ಅತಿಬುದ್ಧಿವಂತ. ೧೯೮೩ರ ವಾರ್ಷಿಕ ವರದಿಯಲ್ಲಿ ಭೋಪಾಲ್ ಅನಿಲ ಘಟಕ ಅಸುರಕ್ಷಿತವಾಗಿದೆ, ಕೆಲವಾರು ಸಮಸ್ಯೆಗಳಿವೆ ಎಂದು ವರದಿಯಾಗಿತ್ತು. ಆತ ಅದರ ಆಧಾರದಲ್ಲಿ ಅಮೆರಿಕಾದಲ್ಲಿರುವ ಅನಿಲ ಸ್ಥಾವರವನ್ನು ಸರಿಪಡಿಸಿದ. ಭಾರತದಲ್ಲಿ ಏನೇ ಆದ್ರೂ ಪರ್ವಾಗಿಲ್ಲ, ಅಮೆರಿಕದ ಪ್ರಜೆಗಳು ಸಾಯೊಲ್ವಲ್ಲ ಅಂತ! ತತ್‌ಪರಿಣಾಮವೇ ಈ ಭೀಕರ ದುರಂತ!
ಅಲ್ಲಿದ್ದ ಕೆಡುಕುಗಳು ಏನು ಅಂತ ಸ್ವಲ್ಪ ಗಮನಹರಿಸಿ ಅಂದೇ ಸರಿಪಡಿಸಿದ್ರೆ ಎಷ್ಟೋ ಸಾವಿರ ಸಾವು-ನೋವು ತಪ್ತಾ ಇತ್ತಲ್ವ.
ದುರಂತದ ಬಳಿಕ ಕಿಂಚಿತ್ತು ಪಶ್ಚಾತ್ತಾಪವಾದರೂ ಆಗಿದ್ಯಾ ಆ ಮನುಷ್ಯನಿಗೆ? ಊಹೂಂ. ಸರಕಾರದ ಸಹಕಾರದಿಂದ ಸರಳವಾಗಿ ತಲೆಮರೆಸಿಕೊಂಡು ಅಮೆರಿಕಕ್ಕೆ ಹಾರಿ ಹೋದ!

ಭಾರತದ ನ್ಯಾಯವ್ಯವಸ್ಥೆ ಎಷ್ಟು 'ಕರುಣಾ'ಜನಕವಾಗಿದೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?
ದೇಶದ ಪ್ರಜೆಗಳಾದ ನಾವು ಸ್ವಲ್ಪ ಯೋಚಿಸ್ಬೇಕಲ್ವ? ಈ ನ್ಯಾಯ ವ್ಯವಸ್ಥೆಗೊಂದು ಮಹತ್ವದ ಮಾರ್ಪಾದು ಬರ್ಬೇಕಲ್ವ.. ಅದಕ್ಕೇಂತ ಇವತ್ತು ಒಂದು ಅರ್ಜಿ ಸಲ್ಲಿಸಿದ್ರೆ, ಅದರ ವಿಚಾರಣೆ ಆಗಿ, ಸಾಕ್ಷ್ಯಾಧಾರಗಳ ಪರಿಶೀಲನೆ, ಮರುಪರಿಶೀಲನೆ, ವಿಚಾರಣೆ, ಮರುವಿಚಾರಣೆಗಳೆಲ್ಲ ಆಗಿ ಕೊನೆಗೊಂದು ನಿರ್ಧಾರಕ್ಕೆ ಬರೋವಾಗ ನಮ್ಮ ಮೊಮ್ಮಕ್ಕಳ ಕಾಲವಾದೀತೇನೊ...!

ಅಂತೂ ಭೋಪಾಲ್ ಅನಿಲ ದುರಂತದಲ್ಲಿ ಬಲಿಯಾದವರ ಆತ್ಮಕ್ಕೆ ಶಾಂತಿಯಿರಲಿ ಒಂದು ನಿಡಿದಾದ ಉಸಿರೂ ಬಂದಿರಲಿಕ್ಕಿಲ್ಲ.

03 May 2010

ಸದ್ದಿಲ್ಲದೆ ಸಾಗುತಿದೆ ಮತ್ತೊಂದು ಆಕ್ರಮಣಪಥ...



ಸುಮಾರು ಹತ್ತು ದಿನಗಳ ಹಿಂದೆ ಪತ್ರಿಕೆಯೊಂದರ ಅಂಕಣಬರಹವೊಂದರಲ್ಲಿ (vk,22 April,'ನೂರೆಂಟು ಮಾತು') ಇಂಥದೊಂದು ಮಾಹಿತಿ ಓದಿ ನಿಜಕ್ಕೂ ದಂಗಾಗಿ ಹೋಯ್ತು.ಈ ವಿಚಾರ ಕೇಳಿದ್ರೆ ನಿಮ್ಗೂ ಆಶ್ಚರ್ಯವಾದೀತು.
ಇಡೀ ವಿಶ್ವವನ್ನು ಆವರಿಸಿರುವ 'ಚೀನಾದ ಪರಿಣಾಮ'ದ ಕುರಿತಾದ ಲೇಖನ ಅದು. "ಅಮೇರಿಕ,ಯುರೋಪ್,ಆಫ್ರಿಕಾ ಹಾಗೂ ಆಸ್ಟ್ರೇಲಿಯಾದ ಯಾವುದೇ ದೇಶಗಳಿಗೆ ಹೋದ್ರೂ Made in china ಸಾಮನುಗಳದ್ದೇ ಕಾರುಬಾರು. ಗಮನಿಸ್ಬೇಕಾದ ಪ್ರಮುಖ ಸಂಗತಿ ಅಂದ್ರೆ ಭಾರತದ ಎಲ್ಲ ಹಳ್ಳಿ, ಮನೆಗಳನ್ನೂ ಈ Made in china ಸಾಮಾನುಗಳು ಮುಟ್ಟಿವೆ. ಮುಂದಿನ ಹತ್ತು ವರ್ಷಗಳಲ್ಲಿ ಗುಂಡುಸೂಜಿ, ಬಟನ್, ಸಾಕ್ಸ್, ಪೆನ್, ಮಗ್, ರೇಜರ್, ಬ್ಲೇಡ್, ಬಕೆಟ್‌ನಿಂದ ಹಿಡಿದು ನಾವು ಉಪಯೋಗಿಸುವ ಶೇ.65ರಷ್ಟು ವಸ್ತುಗಳು ಚೀನದಲ್ಲಿಯೇ ಉತ್ಪಾದನೆಯಗಲಿದೆ! ಇಷ್ಟೇ ಆಗಿದ್ರೆ ok.ಆದ್ರೆ ನಾವು ನಿತ್ಯ ಪೂಜಿಸೋ ದೇವರ ವಿಗ್ರಹ,ದೇವರ ಫೋಟೋ,ಕುಂಕುಮ,ಅರಿಶಿನ,ದೇವರ ಫೋಟೋಫ್ರೇಮ್,ಗಂಧದ ಮಾಲೆ, ಪ್ಲಾಸ್ಟಿಕ್ ಹೂವು,ಗಂಧ ತೇಯುವ ಕಲ್ಲೂ ಸೇರಿದಂತೆ ಪೂಜಾ ಸಾಮಗ್ರಿಗಳು ಭಾರತಕ್ಕೆ ಚೀನಾದಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಬರ್ತಾ ಇವೆಯಂತೆ!

ಅಂಕಿ-ಸಂಖ್ಯೆಗಳ ವಿವರದಲ್ಲಿ ಹೇಳೋದಾದ್ರೆ:
ಕಳೆದ ವರ್ಷ ಚೀನಾದ ಯಿವು ಎಂಬ ನಗರದಲ್ಲಿ ತಯಾರಾದ ಎಂಟು ಕೋಟಿ ವಿವಿಧ ಬಗೆಯ ಗಣೇಶನ ವಿಗ್ರಹಗಳು ಭಾರತಕ್ಕೆ ರಫ್ತಾಗಿದೆ.
ಸುಮಾರು ಎರಡು ಕೋಟಿ ಕೃಷ್ಣ,ಹನುಮಂತ,ತಿರುಪತಿ ವೆಂಕಟೇಶ,ಪದ್ಮನಾಭ,ಶಬರಿಮಲೆ ಅಯ್ಯಪ್ಪ ವಿಗ್ರಹಗಳು ಯಿವು ನಗರದಿಂದ ಬಂದಂಥವು.
ನಾವು ಪೂಜಿಸುವ ಈ ವಿಗ್ರಹಗಳ ಪೈಕಿ ಶೇ.55ರಷ್ಟು ಚೀನಾದಲ್ಲಿ ತಯಾರಾದವು!
ಈ ವರ್ಷವೊಂದರಲ್ಲಿಯೇ ಚೀನಾ ಹನ್ನೆರಡು ದಶಲಕ್ಷ ಟನ್ ಕುಂಕುಮವನ್ನು ಭಾರತಕ್ಕೆ ರಫ್ತು ಮಾಡಲಿದೆ.ಈ ಕುಂಕುಮ ಭಾರತದಲ್ಲಿ ಸಿಗುವುದಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತದೆಯೆಂಬುದನ್ನು ಗಮನಿಸ್ಬೇಕು.
ಕಳೆದ ಮೂರು ವರ್ಷಗಳಲ್ಲಿ ಚೀನಾ ಭಾರತಕ್ಕೆ ಕಳಿಸಿದ ಕರ್ಪೂರ ನಲುವತ್ತೊಂದು ಲಕ್ಷ ಟನ್!
ಈ ವರ್ಷ ಚೀನಾ,ಕನ್ನಡವೂ ಸೇರಿದಂತೆ ಭಾರತದ ಎಲ್ಲ್ಲಾ ಭಾಷೆಗಳಲ್ಲಿ ಮುದ್ರಿಸಿದ ಸುಮಾರು ಮುನ್ನೂರು ಪುಟಗಳನ್ನು ಒಳಗೊಂಡ ನಾಲ್ಕು ಕೋಟಿ 'ಭಗವದ್ಗೀತೆ'ಯ ಪ್ರತಿಗಳನ್ನು ನಮ್ಮಲ್ಲಿಗೆ ಕಳುಹಿಸಲು ನಿರ್ಧರಿಸಿದ್ಯಂತೆ!


ಇದು ಹೀಗೇ ಮುಂದುವರಿದ್ರೆ ಇನ್ನು ಒಂದೆರಡು ವರ್ಷಗಳಲ್ಲಿ ಭಾರತದ ಎಲ್ಲ ದೇಗುಲಗಳಲ್ಲಿನ, ಎಲ್ಲರ ಮನೆ ಪೂಜಾಕೋಣೆಯಲ್ಲಿನ ವಸ್ತುಗಳೆಲ್ಲ Made in China ಆಗೋದು ಖಚಿತ."

"ಅಬ್ಬ ಚೀನಾದ ಸಾಧನೆಯೇ!" ಅಂತ ನಾವು ಮೂಗುಮುರಿದು ಬೆರಗಾಗಿ ಕಣ್‌ಕಣ್ ಬಿಡೋ ಹೊತ್ಗೆ ಚೀನಾ ನಮ್ಮ ಜೀವನದ ಮೂಲವನ್ನು ಅಲುಗಾಡಿಸಿಬಿಟ್ಟಿರುತ್ತೆ. ಖಂಡಿತ ನಾವು ಈಗ ಎಚ್ಚೆತ್ಕೊಳ್ಳೇಬೇಕು. ಇಷ್ಟೊಂದು ದೊಡ್ಡಮಟ್ಟಿನ ವಹಿವಾಟು ಚೀನಾಕ್ಕೆ ಸಿಗ್ಬೇಕಾದ್ರೆ ಅದ್ಕೆ ನಮ್ಮವ್ರೇ ಕಾರಣ ತಾನೆ..? ನಾವು order ಕೊಟ್ರೇನೆ ತಾನೆ ಅವ್ರು ಮಾಡೋದು.. 2020ರ ಹೊತ್ಗೆ ಭಾರತ ನಂಬರ್ ವನ್ ಆಗುತ್ತೇಂತ ಕನಸು ಕಾಣ್ತಾ, ಹಾಯಾಗಿ ನಿದ್ದೆ ಮಾಡ್ತಾ ಇದ್ರೆ 'ವ್ಯಾಪಾರಿ ಆಕ್ರಮಣ'ಗಳು ನಮ್ಮ ಅಂತಃಸ್ಸತ್ವವನ್ನೇ ಕರಗಿಸಿಬಿಡುತ್ವೆ. ನಮ್ಮಲ್ಲಿನ ಸ್ವ-ಉದ್ಯೋಗ, ಗುಡಿಕೈಗಾರಿಕೆಗಳು ಹೇಳಹೆಸರಿಲ್ಲದಂತೆ ಮಾಯವಾಗಿ ಬಿಡುತ್ವೆ. ಮತ್ತೊಮ್ಮೆ ದಾಸ್ಯದ ಬಲೆಗೆ ಸಿಲುಕಿಕೊಳ್ಳೋ ಮೊದ್ಲು ಜಾಗೃತರಾಗೋಣ. ಜಾಗೃತರಾಗ್ಲೇಬೇಕು.. ಅಲ್ವ..?