04 December 2012

ಶಿಕ್ಷಣವೆಂಬ ಭಾರೀ ಬಿಸ್‌ನೆಸ್ಸು...




ಕಾಲವೊಂದಿತ್ತು.. ವಿದ್ಯೆಯು ಒಂದು ಮಹಾದಾನವಾಗಿದ್ದ ಕಾಲ ಒಂದಿತ್ತು.. ಗುರುವು ತನ್ನ ಜ್ಞಾನವನ್ನು ದಾನವಾಗಿ ಧಾರೆಯೆರೆಯುತ್ತಿದ್ದ ಕಾಲವದು. ಪ್ರತಿಫಲಾಪೇಕ್ಷೆಯಿಲ್ಲದ ನಿಸ್ವಾರ್ಥ ಸೇವೆಯಾಗಿತ್ತದು. ಶಿಷ್ಯನು ತನ್ನ ಶಕ್ತ್ಯಾನುಸಾರ ಗುರುದಕ್ಷಿಣೆ ನೀಡಿದರೆ ಸಾಕಿತ್ತು. ಗುರುವಿನ ಕುರಿತಾದ ಗೌರವಾದರಗಳೂ ಶ್ರೇಷ್ಠಮಟ್ಟದಲ್ಲಿದ್ದವು.

ಕಾಲಕಳೆದಂತೆ ಶಾಲೆಗಳು ತೆರೆದು ಶಿಕ್ಷಣದ ಹರವು ಹೆಚ್ಚಾಗುತ್ತಾ ಬಂತು. ನಿಯಮಿತವಾದರೂ ಕೈಗೆಟುಕುವ ಶುಲ್ಕದಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿತ್ತು. ಈಗಲೂ ಸರ್ಕಾರಿ ಶಾಲೆಗಳಲ್ಲಿ ಅಂಥ ಶಿಕ್ಷಣ ದೊರೆಯುತ್ತಿದೆ. ಆದರೆ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವುದು ನಮ್ಮ ಸಮಾಜದ ನಾಗರಿಕರ ಮರ್ಯಾದೆಗೆ ಕಡಿಮೆಯಾಗುತ್ತಲ್ಲ..?! ಹಾಗಾಗಿ ತಮ್ಮ ಮಕ್ಕಳನ್ನು ’ಅತ್ಯುತ್ತಮ’ ಖಾಸಗಿ ಶಾಲೆಗಳಿಗೆ ಸೇರಿಸುವ trend ಪ್ರಾರಂಭವಾಯ್ತು. ಅದರಲ್ಲೂ ತಮ್ಮ ಮಕ್ಕಳು ಇಂಟರ್‌ನ್ಯಾಶನಲ್ ಸ್ಕೂಲೋ, ಟೆಕ್ನೋ ಸ್ಕೂಲ್‌ನಲ್ಲೋ ಕಲಿತರೆ ಅತಿಬುದ್ಧಿವಂತರಾಗಿ, ಮುಂದೆ ನೋಬೆಲ್ ಪ್ರೈಜ್ ತಗೊಳ್ತಾರೆ ಅನ್ನೋ ಭ್ರಾಂತಿ!

ಪೋಷಕರ ಈ ಭ್ರಾಂತಿಯು ಹೊಸತೊಂದು ’ಬ್ಯುಸಿನೆಸ್’ನ ಉದಯಕ್ಕೆ ನಾಂದಿಯಾಯ್ತೇನೊ! so called ಮೌಲ್ಯಿಕ ಶಿಕ್ಷಣ ಸಾಮಾನ್ಯ ವರ್ಗದವರ ಕೈಗೆಟುಕದ ಮಟ್ಟಕ್ಕೆ ಏರಿಬಿಟ್ಟಿತು. ಬೆಂಗಳೂರೆಂಬ ಮಹಾನಗರದಲ್ಲಿ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳ ಶುಲ್ಕ ಎಷ್ಟೆಂದು ಕೇಳಿದ್ರೆ ಆಶ್ಚರ್ಯವಾಗುತ್ತೆ! ವರ್ಷಕ್ಕೆ 70-80 ಸಾವಿರ ರುಪಾಯಿಗಳು! ತಾಂತ್ರಿಕ ಶಿಕ್ಷಣಕ್ಕೆ ತತ್ಸಮಾನವಾದ ಶುಲ್ಕ ಪ್ರಾಥಮಿಕ ಶಿಕ್ಷಣಕ್ಕೆ!

ಕಡೆಗೂ ವಿದ್ಯೆಯ ಶ್ರೇಷ್ಠತೆಯನ್ನು ’ಶುಲ್ಕ’ದಲ್ಲಿ ಅಳೆಯುವ ಕಾಲ ಬಂತಲ್ಲ.. ಮಹಾದಾನವೆನಿಸಿದ್ದ ವಿದ್ಯೆಯನ್ನೂ ವ್ಯಾಪಾರೀಕರಣ ಮಾಡುವ ಗತಿ ಬಂತಲ್ಲ..ಛೆ, ಎಂಥಾ ವಿಪರ್ಯಾಸವಿದು!

09 August 2012

ವೇಣುಲೋಲನ ನಮಿಸುತ್ತಾ...



ಆ ಮುರಲಿಯಲ್ಲದೇನು ಮೋಡಿಯಿಹುದೋ...
ಆ ವೇಣುಗಾನದ ನಾದವದೇನು ಮಾಯೆ ಮಾಡಿಹುದೋ...
ಆ ಕೊಳಲ ಕೊರಳಲ್ಲದ್ಯಾವ ಕೋಗಿಲೆಯಿಹುದೋ...
ಅದ ಕೇಳುತ್ತಿದ್ದರೆ ಮನವಿದು ಮಿಡಿಯದಿರದು...
ಎದ್ದೆದ್ದುಬರುವ ತಲ್ಲಣಗಳೆಲ್ಲ ಅಲ್ಲೇ ಸ್ತಬ್ಧವಾಗಿಬಿಡುವವು...
ಇಂತಿರಲು,
ಆ ಅಸದಳ ನಾದದೊಡೆಯ ಶ್ರೀಕೃಷ್ಣನ ಸಾನ್ನಿಧ್ಯ ಇನ್ನೆಷ್ಟು ಹಿತವಿರಬಹುದು...
ಅವನೊಲುಮೆಯ ಕೃಪಾಕಟಾಕ್ಷದ ಮುಂದೆ ಕಷ್ಟಗಳೆಲ್ಲ ಕರಗಿಹೋದಾವು...
ಸಮ್ಮೋಹನಗೊಳಿಸುವ ಮೋಹನಗಾನಪ್ರಿಯನ ಈ ಜನುಮದಿನ...
ವಿನೀತರಾಗಿ ಆತನ ಆಶೀರ್ವಾದ ಬೇಡೋಣ...