Showing posts with label ಅನುಸ್ವರ. Show all posts
Showing posts with label ಅನುಸ್ವರ. Show all posts

02 March 2010

ತಪ್ಪು ಯಾರದ್ದು. . .??



ಸ್ನೇಹಿತ್ರೆ, ಕಳ್ದ ಕೆಲವು ತಿಂಗಳುಗಳಿಂದ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವ ಒಂದು so called 'ರಿಯಾಲಿಟಿ ಶೋ'ದ ಬಗ್ಗೆ ಹೇಳಲೇಬೇಕನಿಸ್ತು.  ಮೇಲ್ನೋಟಕ್ಕೆ ಅದೊಂದು ಉತ್ತಮ ಕೌನ್ಸಿಲಿಂಗ್ ಕಾರ್ಯಕ್ರಮದ ಹಾಗೆ ಭಾಸವಾಗುತ್ತೆ.  ಅಥವ ಆ ರೀತಿ ಭಾಸವಾಗುವಂತೆ ತೋರ್ಪಡಿಸ್ತಾರೆ.  ಅವರು ಹೇಳೋ ಪ್ರಕಾರ ಅವರ ಉದ್ದೇಶ ನೊಂದ ಮನಗಳಿಗೆ ಸಾಂತ್ವನ ಹೇಳೋದು, ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸೋದು, ಮನಸ್ತಾಪಗಳನ್ನು ದೂರೈಸಿ ನೆಮ್ಮದಿ ನೀಡೋದು ಇತ್ಯಾದಿ
ಇತ್ಯಾದಿ...  ಈ ಬಣ್ಣದ ಮಾತುಗಳಿಗೆ ಮರುಳಾಗಿ ಹಲವಾರು ಜನ, ನಮ್ಮ ಸಮಸ್ಯೆಗಳೂ ಬಗೆಹರಿದಾವು ಎಂಬ ಆಶಾಭಾವದಿಂದ ಈ ಚಾನೆಲ್ ಗಳ ಮೊರೆಹೋಗ್ತಾರೆ.      

ಆದರೆ ಅವರು ಮಾಡೋದೇನು....?  ಸಂಸಾರದ ನಾಲ್ಕು ಗೋಡೆಗಳ ಮಧ್ಯೆಯೇ ಬಗೆಹರಿಯಬೇಕಾದಂಥ ಸಮಸ್ಯೆಗಳನ್ನು ಜಗಜ್ಜಾಹೀರು ಮಾಡಿ, ವೀಕ್ಷಕರ ಹತ್ರ "ಇಲ್ಲಿ ತಪ್ಪು ಯಾರದ್ದು..?" ಅಂತ ಕೇಳ್ತಾರೆ.  ಇಲ್ಲಿ ತಪ್ಪು ಮತ್ತ್ಯಾರದ್ದೂ ಅಲ್ಲ, ಆ ಚಾನೆಲ್ ನವರದ್ದೇ.  ಗಂಡ-ಹೆಂಡತಿ, ಅತ್ತೆ-ಸೊಸೆ, ಅಣ್ಣ-ತಮ್ಮ, ತಂದೆ-ಮಗ ಕಚ್ಚಾಡುವುದನ್ನೇ ಒಂದು 'ಕಾರ್ಯಕ್ರಮ' ಅಂತ ಮಾಡಿ ತೋರಿಸ್ತಾರಲ್ಲ ಏನೆನ್ನಬೇಕು ಇದಕ್ಕೆ....ಕೊನೆಗೆ ಅವರಿಗೆ ತಾವೇ ಸಾಂತ್ವನ ಹೇಳಿ, ಅವರ ಸಮಸ್ಯೆಯನ್ನು ತಾವೇ ಬಗೆಹರಿಸಿದ್ದೇವೇಂತ ಪೋಸು ಕೊಡ್ತಾರೆ.  ಸಮಸ್ಯೆ ಬಗೆಹರಿಸುವ ಒಳ್ಳೆ ಮನಸ್ಸು ಇದ್ರೆ, ಅವರ ಸ್ಟುಡಿಯೊದೊಳ್ಗಡೆನೇ ಒಂದು ಕೌನ್ಸಿಲಿಂಗ್ ಮಾಡಿ, ಮನಸ್ತಾಪ ಪರಿಹರಿಸ್ಬಹುದಲ್ಲ... ಅದನ್ನು ಚಿತ್ರೀಕರಿಸಿ ಊರೆಲ್ಲ ಪ್ರಚಾರ ಮಾಡೋ ಅಗತ್ಯ ಇದ್ಯಾ?  ಈ ರೀತಿ ಮಾಡೋದ್ರಿಂದ ಆ ಸಂಸಾರದ ಮಾನ, ಮರ್ಯಾದೆ ಬೀದಿಪಾಲಾಗುತ್ತೆ ಅನ್ನುವ ಕನಿಷ್ಟ ಜ್ಞಾನ ಕೂಡ ಇವ್ರಿಗೆ ಇಲ್ವ...?!  ಮುಂದೆ ಅವರು ಸರಿಯಾಗಿ ಬದುಕಲು ಪ್ರಾರಂಭಿಸಿದರೂ ಸುತ್ತಲಿನ ಸಮಾಜ ಅವರನ್ನು ಯಾವ ದೃಷ್ಟಿಯಲ್ಲಿ ನೋಡೀತು...?  ಪ್ರತಿಬಾರಿಯೂ ಬೊಟ್ಟುಮಾಡಿ ತೋರಿಸಿ ನಗುವ ಜನರ ಮಧ್ಯೆ ಅವರ ಜೀವನ ಇನ್ನಷ್ಟು ನರಕಸದೃಶವಾಗೊಲ್ವೆ...?

ಮಾಧ್ಯಮಗಳು ಯಾವಾಗಲೂ ಜನಪರ ಕಾರ್ಯಕ್ರಮಗಳಿಗೆ, ಸಮಾಜದ ಏಳಿಗೆಗೆ ಒತ್ತುಕೊಡುವಂಥ ಕಾರ್ಯಕ್ರಮಗಳಿಗೆ ಮನ್ನಣೆ ನೀಡಬೇಕಲ್ಲ... ಟಿ.ಆರ್.ಪಿ ಗಿಟ್ಟಿಸುವ ಭರದಲ್ಲಿ ಜನಜೀವನಕ್ಕೆ ಮುಳುವಾಗುವಂಥ ಕಾರ್ಯಕ್ರಮಗಳನ್ನು ಹುಟ್ಟುಹಾಕೋದು ಎಷ್ಟು ಸರಿ...?

ಗುರುತು ಪರಿಚಯವೇ ಇಲ್ಲದ ನಮ್ಮನ್ನುಳಿಸೋದಕ್ಕಾಗಿ ಸಾವಿರಾರು ಯೋಧರು ಹಗಲಿರುಳು ಹೊಣೆಯುತ್ತಿದ್ದಾರೆ, ಹಿಮಪಾತಕ್ಕೆ ಬಲಿಯಾಗ್ತಿದಾರೆ.  ಅವರ ಕಷ್ಟ, ನೋವುಗಳು, ಅವರ ಕುಟುಂಬದ ಪರಿಸ್ಥಿತಿ ಇತ್ಯಾದಿಗಳ ಬಗ್ಗೆ ಯಾರೂ ಯೋಚಿಸೋದೇ ಇಲ್ಲ.  ಆ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ ಮಾಡಿದರೆ ಅಷ್ಟಾದ್ರೂ ಪುಣ್ಯ ಬಂದೀತು.  ಉಂಡು ಮಲಗುವಲ್ಲಿಗೆ ಮುಗಿಯಬೇಕಾದ ಗಂಡಹೆಂಡಿರ ಜಗಳಕ್ಕೆ ರಂಗುರಂಗಿನ ಕಥೆಕಟ್ಟಿ ಜಗಜ್ಜಾಹೀರು ಮಾಡುವ ಬದಲು ದೇಶದೇಳಿಗೆಗೆ ಪೂರಕವಾಗುವ ಕಾರ್ಯಕ್ರಮಗಳನ್ನು ಮಾಡಬಾರದೇಕೆ?

ಮೊದಲು ಇಂಥ ಕಾರ್ಯಕ್ರಮಗಳಿಗೆ ಕುಮ್ಮಕ್ಕು ನೀಡುವ ನಾವು ಎಚ್ಚೆತ್ಕೊಬೇಕು.  ಟೀವಿಯಲ್ಲಿ ಕಾಣಿಸಿಕೊಳ್ಳಬೇಕನ್ನೊ ಹುಚ್ಚುಆಸೆಯ ಬಿರುಗಾಳಿಗೆ ಸಂಸಾರ ನೌಕೆ ಬಲಿಯಾಗದಂತೆ ನೋಡಿಕೊಳ್ಬೇಕು. ಇಂಥ ಕಾರ್ಯಕ್ರಮಗಳ ವಿರುದ್ಧ ಒಕ್ಕೊರಲ ಹೋರಾಟ ನಡೀಬೇಕು.  ಅವರವರೊಳಗೆ ಬಗೆಹರಿಸಿಕೊಳ್ಳಬೇಕಾದ ಸಮಸ್ಯೆಗಳಿಗೆ ಬಹಿರಂಗ ಪ್ರಚಾರ ನೀಡಿ, ಅದನ್ನು ಮತ್ತಷ್ಟು ಉಲ್ಬಣಗೊಳಿಸುವ ಕಾರ್ಯಕ್ರಮಗಳಿಗೆ ಬಹಿಷ್ಕಾರವಿರ್ಲಿ.
ಏನಂತೀರಿ..?

16 February 2010

ಜೀವವೆಂಬುಡುಗೊರೆ....



ನಾವೆಲ್ಲ ನಮ್ ಸ್ನೇಹಿತ್ರು, ಬಂಧುಗಳು, ಆತ್ಮೀಯರು ಕೊಟ್ಟ ಉಡುಗೊರೆಗಳನ್ನು ಎಷ್ಟು ಜೋಪಾನವಾಗಿ ಎತ್ತಿಡ್ತೇವೆ! ಅವರೊಂದಿಗಿನ ಸವಿಸವಿನೆನಪುಗಳು ಆ ವಸ್ತುಗಳಿಗೊಂದು ವಿಶೇಷ ಸ್ಥಾನ ನೀಡಿರ್ತವೆ. ಕೆಲವನ್ನಂತೂ ತೀರಾ ಹಚ್ಕೊಂಡಿರ್ತೇವೆ. ಅದು ಎಲ್ಲಾದ್ರೂ ಕಳೆದು ಹೋದ್ರೆ ಏನೋ ಒಂಥರಾ ಕಸಿವಿಸಿ, ಚಡಪಡಿಕೆ. ಛೆ ಕಳ್ಕೊಂಡುಬಿಟ್ನಲ್ಲಾ ಅಂತ ಬೇಜಾರು. ಆ ವಸ್ತುವಿಗೆ ಅಂಥಾ ಬೆಲೆಯೇನೂ ಇಲ್ದಿದ್ರೂ ಅದು ಬೆಲೆಕಟ್ಟಲಾಗದ್ದಾಗಿರುತ್ತೆ. ನಿಜಾರ್ಥದಲ್ಲಿ ನೋಡಿದ್ರೆ ಅದೊಂದು ಕ್ಷುಲ್ಲಕ ವಿಚಾರ. ಆದ್ರೆ ಅಷ್ಟಕ್ಕೇ ಎಷ್ಟು ತಲೆಕೆಡಿಸಿಕೊಂಡುಬಿಡ್ತೇವಲ್ಲ...

ಸ್ನೇಹಿತ್ರೆ, ಲಕ್ಷ ಲಕ್ಷ ಜೀವಕೋಶಗಳ ವಿಶಿಷ್ಟ ಸಂಯೋಜನೆಯ ಈ ನಮ್ಮ ದೇಹ, ಅದರೊಳಗಿನ 'ಜೀವ' ನಿಜಕ್ಕೂ ನಮ್ಗೆ ದೊರೆತ ಅತ್ಯಂತ ದೊಡ್ಡ ಉಡುಗೊರೆ ಅಲ್ವಾ... ಅಗೋಚರ, ಅದ್ಭುತ ಶಕ್ತಿಯಿತ್ತ ಅತ್ಯದ್ಭುತ ಉಡುಗೊರೆಯಿದು. ಜೀವವೇ ಇಲ್ಲದ ಸಣ್ಣ ಸಣ್ಣ ವಸ್ತುಗಳ ಬಗ್ಗೆ ನಾವು ಅಷ್ಟು ಕಾಳಜಿ ತೋರಿಸ್ತೇವಂದ್ರೆ ಈ 'ಜೀವ'ಕ್ಕೆ ಇನ್ನೆಷ್ಟು ತೋರಿಸ್ಬೇಡ... ಯಾವುದೋ ಒಂದು ಹಂತದಲ್ಲಿ  ಏನೋ ಒಂದು ಹತಾಶೆಗೆ, ದುಃಖಕ್ಕೆ ನೊಂದುಕೊಂಡು ಜೀವವನ್ನೇ ಕಳ್ಕೊಳ್ಳೋದು ಎಷ್ಟು ಸರಿ..? ಕಳೆದುಹೋದ ವಸ್ತುಗಳು ಮತ್ತೆ ಸಿಕ್ಕೀತು... ಅಥವಾ ಅಂಥದ್ದೇ ಇನ್ನೊಂದನ್ನು, ಕೊಟ್ಟವರಿಂದ್ಲೇ ಮತ್ತೆ ಪಡೀಬಹುದು. ಆದ್ರೆ ಈ ಜೀವ, ಜೀವನ.... ಊಹೂಂ ಖಂಡಿತ ಮತ್ತೆ ಬರೊಲ್ಲ...

ಪರೀಕ್ಷೆಯಲ್ಲಿ ಫೇಲಾದೆ, ನನ್ನ ಆತ್ಮೀಯರು ನನ್ನ ತೊರೆದ್ರು, ನಂಗೆ ಬೇಕಾದ್ದು ಸಿಗ್ಲಿಲ್ಲ, ನಂಗೆ ಯಾರೋ ಬೈದ್ರು, ಯಾವುದೋ ಒಂದು ಕೆಲ್ಸ ಹೋಯ್ತು, ಅವಮಾನ ಆಯ್ತು - ಹೀಗೆ ಇಂಥ ಸಣ್ಣಪುಟ್ಟ ವಿಚಾರಗಳಿಗೆ ಜೀವಕ್ಕೇ ಎರವನ್ನು ತಂದುಕೊಳ್ಳೋದು ಸರೀನಾ... ಛೆ, ನಮ್ಮ ಈ 'ಜೀವ' ಅಷ್ಟು cheap ಆಗ್ಬಿಡ್ತಾ...? ಇಷ್ಟು ಸಣ್ಣ ವಿಚಾರಕ್ಕೆ ಆತ್ಮಹತ್ಯೆ ಮಾಡ್ಕೊಳ್ಳೋದಂದ್ರೆ ಈ ಆತ್ಮಕ್ಕೆ, ಈ ಜೀವಕ್ಕೆ ಏನೇನೂ ಬೆಲೆ ಇಲ್ಲ ಅಂದ ಹಾಗಾಯ್ತಲ್ಲ...

"ಸಾಕಾಗಿ ಹೋಯ್ತು...ಈ ಜೀವನವೇ ಬೇಡ" ಅಂತನ್ನಿಸೋ ಕ್ಷಣಗಳು ನೂರಾರು ಬರ್ಬಹುದು. ಆದ್ರೆ ಅದು ಕ್ಷಣಿಕ ಮಾತ್ರ. ಮರುದಿನ ಮತ್ತೊಂದು ಜೀವನಪ್ರೀತಿ ಮೊಳಕೆ ಒಡೆಯುತ್ತೆ. ಅಲ್ಲಿವರೆಗೆ ಜೀವಹಿಡಿದು ಕೂತ್ರೆ ಅಷ್ಟು ಸಾಕು. ಆಮೇಲೆ, "ಛೆ, ಎಂಥಾ ಕೆಟ್ಟ ಯೋಚ್ನೆ ಮಾಡಿದ್ದೆ.." ಅಂತನ್ನಿಸುತ್ತೆ.

ಯೋಚ್ನೆ ಮಾಡಿ, ನಿಮ್ಮವರನ್ನೂ ಯೋಚ್ನೆಗೆ ಹಚ್ಚಿ. ಬೇರೆ ಯಾವ ಪ್ರಾಣಿಗೂ ಸಿಕ್ಕದ ಅತಿಶ್ರೇಷ್ಠ ಉಡುಗೊರೆ ನಮ್ಗೆ ಸಿಕ್ಕಿದೆ. ಇರುವವರೆಗೆ, ಗಮ್ಯ ಕರೆವವರೆಗೆ ಅದನ್ನು ಕಾಪಾಡಿಕೊಂಡು, ಅದಕ್ಕೆ ನಾವೇ ಎರವಾಗದ ಹಾಗೆ 'ಜೀವಿಸು'ವುದು ಖಂಡಿತವಾಗಿ ನಮ್ಮ ಕರ್ತವ್ಯ. ಅಲ್ವ...