04 November 2013

ನಾಗರಿಕರ ’ಅನಾಗರಿಕ’ತೆ


  ಬೆಂಗಳೂರೆಂಬ ಮಹಾನಗರ(ನರಕ)ದಲ್ಲಿ ನಾನು ಕಾಣುತ್ತಿರುವ ಎರಡನೇ ದೀಪಾವಳಿಯಿದು. ರಾಜ್ಯದ ರಾಜಧಾನಿ ಎನಿಸಿಕೊಂಡಿರುವ ಈ ನಗರದಲ್ಲಿ, ನಮ್ಮ ಸಂಸ್ಕೃತಿ ಬಿಂಬಿಸುವ ಹಬ್ಬದಾಚರಣೆಗಳು ತಮ್ಮ ಮೂಲಾರ್ಥವನ್ನು ಕಳೆದುಕೊಂಡು ’ವೈಭವಪೂರ್ಣ’ ವಿಕೃತಿಯಲ್ಲಿ ಆಚರಿಸಲ್ಪಡುತ್ತಿವೆಯೆಂಬುದು ವಿಷಾದನೀಯ. ಪಕ್ಕದ ಮನೆಯವರಿಗಿಂತ ನಾವು ಹೆಚ್ಚು ಅದ್ದೂರಿಯಾಗಿ ಹಬ್ಬವನ್ನಾಚರಿಸಬೇಕೆಂಬ ಪೈಪೋಟಿ ಜನರಲ್ಲಿ! ಹಬ್ಬಗಳನ್ನು ಭಕ್ತಿಯಿಂದ ಆಚರಿಸುವುದರ ಬದಲು ’ಆಡಂಬರ’ದಿಂದ ಆಚರಿಸುವವರೇ ಅನೇಕರು.




ಇಂತಿರುವಾಗ ದೀಪಗಳ ಹಬ್ಬ ದೀಪಾವಳಿ ಈ ಬಾರಿಯೂ ಪಟಾಕಿಗಳ ದಡಬಡ ಸದ್ದಿನೊಂದಿಗೆ ಪ್ರಾರಂಭವಾಯ್ತು. ದೀಪ ಹಚ್ಚೋಣವೆಂದು ಮನೆಯಿಂದ ಹೊರಬಂದರೆ ಯಾವ ಕಡೆಯಿಂದ ಪಟಾಕಿ ಸಿಡಿದು ಕಣ್ಣು ಕಿವಿ ಸುಟ್ಟು ಹೋದೀತೋ ಎಂಬ ಭಯ! ಜೊತೆಗೆ ಉಸಿರಾಡುವ ಗಾಳಿಯ ಕಣ ಕಣದಲ್ಲೂ ಪಟಾಕಿಯ ದುರ್ನಾತಯುಕ್ತ,ವಿಷಪೂರಿತ ರಾಸಾಯನಿಕ ಸೇರಿ ಶ್ವಾಸಕೋಶಕ್ಕೆ ಅದೆಷ್ಟು ಹಾನಿ ಮಾಡಿದೆಯೋ?! ಸಾವಿರ ಸಾವಿರ ರುಪಾಯಿಗಳ ಪಟಾಕಿ ಸಿಡಿಸಿ ತಮಗೂ, ತಮ್ಮ ಪಕ್ಕದವರಿಗೂ ವಿವಿಧ ರೀತಿಯ ಹಾನಿಯುಂಟುಮಾಡುವುದರಲ್ಲಿ ಅದೇನು ಸಂಭ್ರಮ ಈ ಜನತೆಗೆ! ಅವರೆಲ್ಲ ಅನಕ್ಷರಸ್ಥರಾಗಿದ್ದರೆ, ಪಾಪ ಆ ಬಗ್ಗೆ ಅರಿವಿಲ್ಲ, ಎಲ್ಲರೂ ಮಾಡಿದಂತೆ ತಾವೂ ಮಾಡಬೇಕೆಂದುಕೊಳ್ಳುತ್ತಾರೆ ಎನ್ನಬಹುದು. ಆದರೆ ಇವರೆಲ್ಲ ಸುಪ್ರಸಿದ್ಧ ಕಾಲೇಜುಗಳಲ್ಲಿ ಕಲಿತು, ದ್ವಿ-ಪದವೀಧರರಾಗಿ, ಅಂತಾರಾಷ್ಟ್ರೀಯ ಕಂಪೆನಿಗಳಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ತಣ್ಣಗೆ ಕುಳಿತು ಕೆಲಸ ಮಾಡುವವರು! ಹೋಗಲಿ ಬಿಡಿ, ಏನೋ ತಾವು ’ಬೆವರು ಸುರಿಸಿ’ ಸಂಪಾದಿಸುವ ಹಣದಲ್ಲಿ ಸ್ವಲ್ಪವನ್ನು ’ಸುಟ್ಟು’ ಹಾಳುಮಾಡೋಣ ಎಂದು ಅನ್ನಿಸಿ ಆ ರೀತಿ ಮಾಡುತ್ತಾರೆ ಎನ್ನೋಣ.ಆದರೆ, ಸುಟ್ಟ ಬಳಿಕ ಅಲ್ಲಿ ಉಂಟಾದ ಕಸದ ರಾಶಿಯನ್ನು ಸ್ವಚ್ಛಗೊಳಿಸಬೇಕೆಂಬ ಕನಿಷ್ಟ ಜ್ಞಾನವೂ ಇವರಲ್ಲಿಲ್ಲವಲ್ಲ! ಮೊದಲೇ ಕಸವಿಲೇವಾರಿ ದೊಡ್ಡ ತಲೆನೋವಾಗಿರುವಾಗ ಈ ’ಪಟಾಕಿ ಕಸ’ ಅದಕ್ಕೆ ಮತ್ತಿನ್ನಷ್ಟು ಸೇರ್ಪಡೆ. ಸಾಲು-ಸಾಲು ದೀಪಗಳನ್ನು ಹಚ್ಚಿಡಬೇಕಾದ ಮನೆಯ ಮುಂದೆಲ್ಲ ಪಟಾಕಿಗಳ ರಾಶಿ ರಾಶಿ ಕಸ! ಓಡಾಡುತ್ತಿರುವ ವಾಹನಗಳನ್ನೂ ಲೆಕ್ಕಿಸದೆ ರಸ್ತೆಯಲ್ಲೇ ಪಟಾಕಿಯಿಟ್ಟು ಸಿಡಿಸಿ ರಸ್ತೆಯ ತುಂಬೆಲ್ಲ ಆ ಕಸದಿಂದ ಅಲಂಕರಿಸುತ್ತಾರೆ.


ಆದರೂ, ಕೆಲವೊಂದು ಶಾಲೆಗಳು, ಸಂಸ್ಥೆಗಳು ಈ ನಿಟ್ಟಿನಲ್ಲಿ ಬದಲಾವಣೆ ತರುವ ಗಮನಾರ್ಹ ಕೆಲಸ ಮಾಡುತ್ತಿವೆ. ಪ್ರತಿವರ್ಷ ದೀಪಾವಳಿಗೆ ಪಟಾಕಿ ತರಲೇಬೇಕೆಂದು ಹಠ ಹಿಡಿಯುತ್ತಿದ್ದ ಬಂಧುವೊಬ್ಬರ ಮಗಳು, ಈ ಬಾರಿ ಪಟಾಕಿ ಬೇಡವೆಂದು ಖಡಾಖಂಡಿತವಾಗಿ ಹೇಳಿದಳಂತೆ! ಕಾರಣ, ಅವರ ಶಾಲೆಯಲ್ಲಿ ’ಮಾಲಿನ್ಯ ರಹಿತ’ ದೀಪಾವಳಿ ಆಚರಿಸಬೇಕೆಂದು ಹೇಳಿರುವುದು. ನಿಜಕ್ಕೂ ಇದು ಪ್ರಶಂಸಾರ್ಹ ವಿಚಾರ. ಪ್ರತಿ ಶಾಲೆಯಿಂದ, ಮನೆ-ಮನಗಳಿಂದ ಬದಲಾವಣೆ ಮೂಡಿಬರಬೇಕು. ವಿದ್ಯಾವಂತ ನಾಗರಿಕರು ಹಬ್ಬದ ಮಹತ್ವಕ್ಕನುಗುಣವಾಗಿ ಭಕ್ತಿಯಿಂದ ಆಚರಿಸಬೇಕೇ ಹೊರತು ಹುಚ್ಚು ಆಡಂಬರದ ಮೊರೆಹೋಗಬಾರದು.

ಎಷ್ಟೇ ವಿದ್ಯಾವಂತರಾಗಿದ್ದರೂ ಕೂಡ ಕೆಲವು ವಿಚಾರದಲ್ಲಿ ಕೆಲವರಿಗೆ ಅಜ್ಞಾನವೇ ಇರುತ್ತದೆ. ನನ್ನ ಸಹೋದ್ಯೋಗಿಯೊಬ್ಬರು ಸುಮಾರು 5000 ರೂ.ಗಳ ಪಟಾಕಿಯನ್ನು ಸುಟ್ಟು, ಆ ಬಗ್ಗೆ ಜಂಭದಿಂದ ಹೇಳಿಕೊಳ್ಳುತ್ತಿರುವುದನ್ನು ಕಂಡಾಗ ನಗಬೇಕೊ, ಮರುಕ ಪಡಬೇಕೊ ತಿಳಿಯದಾಯಿತು!

04 December 2012

ಶಿಕ್ಷಣವೆಂಬ ಭಾರೀ ಬಿಸ್‌ನೆಸ್ಸು...




ಕಾಲವೊಂದಿತ್ತು.. ವಿದ್ಯೆಯು ಒಂದು ಮಹಾದಾನವಾಗಿದ್ದ ಕಾಲ ಒಂದಿತ್ತು.. ಗುರುವು ತನ್ನ ಜ್ಞಾನವನ್ನು ದಾನವಾಗಿ ಧಾರೆಯೆರೆಯುತ್ತಿದ್ದ ಕಾಲವದು. ಪ್ರತಿಫಲಾಪೇಕ್ಷೆಯಿಲ್ಲದ ನಿಸ್ವಾರ್ಥ ಸೇವೆಯಾಗಿತ್ತದು. ಶಿಷ್ಯನು ತನ್ನ ಶಕ್ತ್ಯಾನುಸಾರ ಗುರುದಕ್ಷಿಣೆ ನೀಡಿದರೆ ಸಾಕಿತ್ತು. ಗುರುವಿನ ಕುರಿತಾದ ಗೌರವಾದರಗಳೂ ಶ್ರೇಷ್ಠಮಟ್ಟದಲ್ಲಿದ್ದವು.

ಕಾಲಕಳೆದಂತೆ ಶಾಲೆಗಳು ತೆರೆದು ಶಿಕ್ಷಣದ ಹರವು ಹೆಚ್ಚಾಗುತ್ತಾ ಬಂತು. ನಿಯಮಿತವಾದರೂ ಕೈಗೆಟುಕುವ ಶುಲ್ಕದಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿತ್ತು. ಈಗಲೂ ಸರ್ಕಾರಿ ಶಾಲೆಗಳಲ್ಲಿ ಅಂಥ ಶಿಕ್ಷಣ ದೊರೆಯುತ್ತಿದೆ. ಆದರೆ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವುದು ನಮ್ಮ ಸಮಾಜದ ನಾಗರಿಕರ ಮರ್ಯಾದೆಗೆ ಕಡಿಮೆಯಾಗುತ್ತಲ್ಲ..?! ಹಾಗಾಗಿ ತಮ್ಮ ಮಕ್ಕಳನ್ನು ’ಅತ್ಯುತ್ತಮ’ ಖಾಸಗಿ ಶಾಲೆಗಳಿಗೆ ಸೇರಿಸುವ trend ಪ್ರಾರಂಭವಾಯ್ತು. ಅದರಲ್ಲೂ ತಮ್ಮ ಮಕ್ಕಳು ಇಂಟರ್‌ನ್ಯಾಶನಲ್ ಸ್ಕೂಲೋ, ಟೆಕ್ನೋ ಸ್ಕೂಲ್‌ನಲ್ಲೋ ಕಲಿತರೆ ಅತಿಬುದ್ಧಿವಂತರಾಗಿ, ಮುಂದೆ ನೋಬೆಲ್ ಪ್ರೈಜ್ ತಗೊಳ್ತಾರೆ ಅನ್ನೋ ಭ್ರಾಂತಿ!

ಪೋಷಕರ ಈ ಭ್ರಾಂತಿಯು ಹೊಸತೊಂದು ’ಬ್ಯುಸಿನೆಸ್’ನ ಉದಯಕ್ಕೆ ನಾಂದಿಯಾಯ್ತೇನೊ! so called ಮೌಲ್ಯಿಕ ಶಿಕ್ಷಣ ಸಾಮಾನ್ಯ ವರ್ಗದವರ ಕೈಗೆಟುಕದ ಮಟ್ಟಕ್ಕೆ ಏರಿಬಿಟ್ಟಿತು. ಬೆಂಗಳೂರೆಂಬ ಮಹಾನಗರದಲ್ಲಿ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳ ಶುಲ್ಕ ಎಷ್ಟೆಂದು ಕೇಳಿದ್ರೆ ಆಶ್ಚರ್ಯವಾಗುತ್ತೆ! ವರ್ಷಕ್ಕೆ 70-80 ಸಾವಿರ ರುಪಾಯಿಗಳು! ತಾಂತ್ರಿಕ ಶಿಕ್ಷಣಕ್ಕೆ ತತ್ಸಮಾನವಾದ ಶುಲ್ಕ ಪ್ರಾಥಮಿಕ ಶಿಕ್ಷಣಕ್ಕೆ!

ಕಡೆಗೂ ವಿದ್ಯೆಯ ಶ್ರೇಷ್ಠತೆಯನ್ನು ’ಶುಲ್ಕ’ದಲ್ಲಿ ಅಳೆಯುವ ಕಾಲ ಬಂತಲ್ಲ.. ಮಹಾದಾನವೆನಿಸಿದ್ದ ವಿದ್ಯೆಯನ್ನೂ ವ್ಯಾಪಾರೀಕರಣ ಮಾಡುವ ಗತಿ ಬಂತಲ್ಲ..ಛೆ, ಎಂಥಾ ವಿಪರ್ಯಾಸವಿದು!

09 August 2012

ವೇಣುಲೋಲನ ನಮಿಸುತ್ತಾ...



ಆ ಮುರಲಿಯಲ್ಲದೇನು ಮೋಡಿಯಿಹುದೋ...
ಆ ವೇಣುಗಾನದ ನಾದವದೇನು ಮಾಯೆ ಮಾಡಿಹುದೋ...
ಆ ಕೊಳಲ ಕೊರಳಲ್ಲದ್ಯಾವ ಕೋಗಿಲೆಯಿಹುದೋ...
ಅದ ಕೇಳುತ್ತಿದ್ದರೆ ಮನವಿದು ಮಿಡಿಯದಿರದು...
ಎದ್ದೆದ್ದುಬರುವ ತಲ್ಲಣಗಳೆಲ್ಲ ಅಲ್ಲೇ ಸ್ತಬ್ಧವಾಗಿಬಿಡುವವು...
ಇಂತಿರಲು,
ಆ ಅಸದಳ ನಾದದೊಡೆಯ ಶ್ರೀಕೃಷ್ಣನ ಸಾನ್ನಿಧ್ಯ ಇನ್ನೆಷ್ಟು ಹಿತವಿರಬಹುದು...
ಅವನೊಲುಮೆಯ ಕೃಪಾಕಟಾಕ್ಷದ ಮುಂದೆ ಕಷ್ಟಗಳೆಲ್ಲ ಕರಗಿಹೋದಾವು...
ಸಮ್ಮೋಹನಗೊಳಿಸುವ ಮೋಹನಗಾನಪ್ರಿಯನ ಈ ಜನುಮದಿನ...
ವಿನೀತರಾಗಿ ಆತನ ಆಶೀರ್ವಾದ ಬೇಡೋಣ...

25 October 2011

ಈ ಅಬ್ಬರ ಬೇಕೆ?



ಪಕ್ಕದ ಮನೆಯ ಪುಟಾಣಿ ಹುಡುಗನಿಗೆ ಎರಡು ದಿನಗಳಿಂದ ಖುಷಿಯೋ ಖುಷಿ. ಕಾರಣ, ಅವನ ಮನದಿಚ್ಛೆಯ ಪಟಾಕಿಗಳು ಇಂದವನ ಕೈಸೇರಿವೆ. ಉಪವಾಸ ಸತ್ಯಾಗ್ರಹಾದಿಗಳು ರಾಷ್ಟ್ರಮಟ್ಟದ ರಾಜಕಾರಣಿಗಳ ಮೇಲೆ ಪ್ರಭಾವ ಬೀರದಿದ್ದರೂ ತನ್ನ ಮನೆಯಲ್ಲಿ ಖಂಡಿತಾ ಪರಿಣಾಮಕಾರಿಯಾಗುತ್ತದೆಂಬ ಅವನ ಅಚಲ ನಂಬಿಕೆ ಇಂದು ಮತ್ತಷ್ಟು ಗಟ್ಟಿಯಾಗಿತ್ತು. ನಾಕು ದಿನಗಳಿಂದ ಹಿಡಿದ ಹಟ ಸಾರ್ಥಕವಾಗಿತ್ತು. ರಂಗು ರಂಗಿನ ಢಂ ಢಮಾರೆನ್ನುವ ಹತ್ತು ಹಲವು ಬಗೆಯ ಪಟಾಕಿಗಳು ಪುಟ್ಟ ಕೈಯಿಂದ ಬೆಂಕಿ ಕಾಣುವ ತವಕದಿ ಕಾದು ಕುಳಿತಿವೆ.

ಹಬ್ಬಗಳ ರಾಜ ಬಂದನೆಂದಾಗ, ದೀಪಗಳಷ್ಟೇ ಗಾಢವಾಗಿ ಪಟಾಕಿಗಳ ಅಬ್ಬರವೂ ನೆನಪಾಗುತ್ತದೆ. ಮಕ್ಕಳಿಗಂತೂ ದೀಪಾವಳಿಯೆಂದರೆ ಅದು 'ಪಟಾಕಿ' ಅಷ್ಟೇ ಎಂಬ ಭಾವನೆ ಬೇರೂರುವಂತಾಗಿದೆ. ಕಾರಣ ಮತ್ಯಾರೂ ಅಲ್ಲ, ನಾವೇ. ಮಗುವಿಗಿನ್ನೂ ಮಾತು ಬರುವ ಮೊದಲೇ ಪಟಾಕಿಯ ಸದ್ದು ಪರಿಚಿತವಾಗುವಂತೆ ಮಾಡುತ್ತೇವೆ ನಾವು. ಅದು ಬೆಳೆದಂತೆ ಪಟಾಕಿಗಾಗಿ ಹಟ ಮಾಡುತ್ತದೆ. ಅದರಿಂದಾಗಬಹುದಾದ ಅನಾಹುತಗಳ ಬಗ್ಗೆ ವಿವೇಚಿಸುವಷ್ಟು ದೊಡ್ಡ ಮನಸ್ಸೇನೂ ಅದರದಾಗಿರುವುದಿಲ್ಲ ತಾನೆ?
ಮಕ್ಕಳಿಗೆ ಹಬ್ಬದ ಮಹತ್ವ, ಹಿನ್ನೆಲೆ ಇತ್ಯಾದಿಗಳನ್ನು ವಿವರಿಸುವ ಬದಲು, ಹಣವನ್ನೇ ಸುಡುವುದನ್ನು ಹೇಳಿಕೊಡುತ್ತೇವೆ. ಲಕ್ಷ್ಮಿ ಪೂಜೆ ಮಾಡಿಯಾದರೂ ಏನು ಪ್ರಯೋಜನ ಹೇಳಿ?
ಪ್ರತಿ ವರ್ಷ ಪಟಾಕಿ ಸಿಡಿತದಿಂದಾಗಿ ಗಾಯಗೊಂಡವರ, ಕಣ್ಣು-ಕೈ-ಕಾಲು ಕಳಕೊಂಡವರ ಆಕ್ರಂದನ ಹೆಚ್ಚಾಗುತ್ತಲೆ ಇದೆಯಷ್ಟೆ. ಕೆಟ್ಟ ಮೇಲೂ ಬುದ್ಧಿ ಕಲಿವ ಬುದ್ಧಿಯೂ ನಮಗಿಲ್ಲದಾಗಿಹೋದ್ದು ವಿಪರ್ಯಾಸ..!