04 November 2013

ನಾಗರಿಕರ ’ಅನಾಗರಿಕ’ತೆ


  ಬೆಂಗಳೂರೆಂಬ ಮಹಾನಗರ(ನರಕ)ದಲ್ಲಿ ನಾನು ಕಾಣುತ್ತಿರುವ ಎರಡನೇ ದೀಪಾವಳಿಯಿದು. ರಾಜ್ಯದ ರಾಜಧಾನಿ ಎನಿಸಿಕೊಂಡಿರುವ ಈ ನಗರದಲ್ಲಿ, ನಮ್ಮ ಸಂಸ್ಕೃತಿ ಬಿಂಬಿಸುವ ಹಬ್ಬದಾಚರಣೆಗಳು ತಮ್ಮ ಮೂಲಾರ್ಥವನ್ನು ಕಳೆದುಕೊಂಡು ’ವೈಭವಪೂರ್ಣ’ ವಿಕೃತಿಯಲ್ಲಿ ಆಚರಿಸಲ್ಪಡುತ್ತಿವೆಯೆಂಬುದು ವಿಷಾದನೀಯ. ಪಕ್ಕದ ಮನೆಯವರಿಗಿಂತ ನಾವು ಹೆಚ್ಚು ಅದ್ದೂರಿಯಾಗಿ ಹಬ್ಬವನ್ನಾಚರಿಸಬೇಕೆಂಬ ಪೈಪೋಟಿ ಜನರಲ್ಲಿ! ಹಬ್ಬಗಳನ್ನು ಭಕ್ತಿಯಿಂದ ಆಚರಿಸುವುದರ ಬದಲು ’ಆಡಂಬರ’ದಿಂದ ಆಚರಿಸುವವರೇ ಅನೇಕರು.




ಇಂತಿರುವಾಗ ದೀಪಗಳ ಹಬ್ಬ ದೀಪಾವಳಿ ಈ ಬಾರಿಯೂ ಪಟಾಕಿಗಳ ದಡಬಡ ಸದ್ದಿನೊಂದಿಗೆ ಪ್ರಾರಂಭವಾಯ್ತು. ದೀಪ ಹಚ್ಚೋಣವೆಂದು ಮನೆಯಿಂದ ಹೊರಬಂದರೆ ಯಾವ ಕಡೆಯಿಂದ ಪಟಾಕಿ ಸಿಡಿದು ಕಣ್ಣು ಕಿವಿ ಸುಟ್ಟು ಹೋದೀತೋ ಎಂಬ ಭಯ! ಜೊತೆಗೆ ಉಸಿರಾಡುವ ಗಾಳಿಯ ಕಣ ಕಣದಲ್ಲೂ ಪಟಾಕಿಯ ದುರ್ನಾತಯುಕ್ತ,ವಿಷಪೂರಿತ ರಾಸಾಯನಿಕ ಸೇರಿ ಶ್ವಾಸಕೋಶಕ್ಕೆ ಅದೆಷ್ಟು ಹಾನಿ ಮಾಡಿದೆಯೋ?! ಸಾವಿರ ಸಾವಿರ ರುಪಾಯಿಗಳ ಪಟಾಕಿ ಸಿಡಿಸಿ ತಮಗೂ, ತಮ್ಮ ಪಕ್ಕದವರಿಗೂ ವಿವಿಧ ರೀತಿಯ ಹಾನಿಯುಂಟುಮಾಡುವುದರಲ್ಲಿ ಅದೇನು ಸಂಭ್ರಮ ಈ ಜನತೆಗೆ! ಅವರೆಲ್ಲ ಅನಕ್ಷರಸ್ಥರಾಗಿದ್ದರೆ, ಪಾಪ ಆ ಬಗ್ಗೆ ಅರಿವಿಲ್ಲ, ಎಲ್ಲರೂ ಮಾಡಿದಂತೆ ತಾವೂ ಮಾಡಬೇಕೆಂದುಕೊಳ್ಳುತ್ತಾರೆ ಎನ್ನಬಹುದು. ಆದರೆ ಇವರೆಲ್ಲ ಸುಪ್ರಸಿದ್ಧ ಕಾಲೇಜುಗಳಲ್ಲಿ ಕಲಿತು, ದ್ವಿ-ಪದವೀಧರರಾಗಿ, ಅಂತಾರಾಷ್ಟ್ರೀಯ ಕಂಪೆನಿಗಳಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ತಣ್ಣಗೆ ಕುಳಿತು ಕೆಲಸ ಮಾಡುವವರು! ಹೋಗಲಿ ಬಿಡಿ, ಏನೋ ತಾವು ’ಬೆವರು ಸುರಿಸಿ’ ಸಂಪಾದಿಸುವ ಹಣದಲ್ಲಿ ಸ್ವಲ್ಪವನ್ನು ’ಸುಟ್ಟು’ ಹಾಳುಮಾಡೋಣ ಎಂದು ಅನ್ನಿಸಿ ಆ ರೀತಿ ಮಾಡುತ್ತಾರೆ ಎನ್ನೋಣ.ಆದರೆ, ಸುಟ್ಟ ಬಳಿಕ ಅಲ್ಲಿ ಉಂಟಾದ ಕಸದ ರಾಶಿಯನ್ನು ಸ್ವಚ್ಛಗೊಳಿಸಬೇಕೆಂಬ ಕನಿಷ್ಟ ಜ್ಞಾನವೂ ಇವರಲ್ಲಿಲ್ಲವಲ್ಲ! ಮೊದಲೇ ಕಸವಿಲೇವಾರಿ ದೊಡ್ಡ ತಲೆನೋವಾಗಿರುವಾಗ ಈ ’ಪಟಾಕಿ ಕಸ’ ಅದಕ್ಕೆ ಮತ್ತಿನ್ನಷ್ಟು ಸೇರ್ಪಡೆ. ಸಾಲು-ಸಾಲು ದೀಪಗಳನ್ನು ಹಚ್ಚಿಡಬೇಕಾದ ಮನೆಯ ಮುಂದೆಲ್ಲ ಪಟಾಕಿಗಳ ರಾಶಿ ರಾಶಿ ಕಸ! ಓಡಾಡುತ್ತಿರುವ ವಾಹನಗಳನ್ನೂ ಲೆಕ್ಕಿಸದೆ ರಸ್ತೆಯಲ್ಲೇ ಪಟಾಕಿಯಿಟ್ಟು ಸಿಡಿಸಿ ರಸ್ತೆಯ ತುಂಬೆಲ್ಲ ಆ ಕಸದಿಂದ ಅಲಂಕರಿಸುತ್ತಾರೆ.


ಆದರೂ, ಕೆಲವೊಂದು ಶಾಲೆಗಳು, ಸಂಸ್ಥೆಗಳು ಈ ನಿಟ್ಟಿನಲ್ಲಿ ಬದಲಾವಣೆ ತರುವ ಗಮನಾರ್ಹ ಕೆಲಸ ಮಾಡುತ್ತಿವೆ. ಪ್ರತಿವರ್ಷ ದೀಪಾವಳಿಗೆ ಪಟಾಕಿ ತರಲೇಬೇಕೆಂದು ಹಠ ಹಿಡಿಯುತ್ತಿದ್ದ ಬಂಧುವೊಬ್ಬರ ಮಗಳು, ಈ ಬಾರಿ ಪಟಾಕಿ ಬೇಡವೆಂದು ಖಡಾಖಂಡಿತವಾಗಿ ಹೇಳಿದಳಂತೆ! ಕಾರಣ, ಅವರ ಶಾಲೆಯಲ್ಲಿ ’ಮಾಲಿನ್ಯ ರಹಿತ’ ದೀಪಾವಳಿ ಆಚರಿಸಬೇಕೆಂದು ಹೇಳಿರುವುದು. ನಿಜಕ್ಕೂ ಇದು ಪ್ರಶಂಸಾರ್ಹ ವಿಚಾರ. ಪ್ರತಿ ಶಾಲೆಯಿಂದ, ಮನೆ-ಮನಗಳಿಂದ ಬದಲಾವಣೆ ಮೂಡಿಬರಬೇಕು. ವಿದ್ಯಾವಂತ ನಾಗರಿಕರು ಹಬ್ಬದ ಮಹತ್ವಕ್ಕನುಗುಣವಾಗಿ ಭಕ್ತಿಯಿಂದ ಆಚರಿಸಬೇಕೇ ಹೊರತು ಹುಚ್ಚು ಆಡಂಬರದ ಮೊರೆಹೋಗಬಾರದು.

ಎಷ್ಟೇ ವಿದ್ಯಾವಂತರಾಗಿದ್ದರೂ ಕೂಡ ಕೆಲವು ವಿಚಾರದಲ್ಲಿ ಕೆಲವರಿಗೆ ಅಜ್ಞಾನವೇ ಇರುತ್ತದೆ. ನನ್ನ ಸಹೋದ್ಯೋಗಿಯೊಬ್ಬರು ಸುಮಾರು 5000 ರೂ.ಗಳ ಪಟಾಕಿಯನ್ನು ಸುಟ್ಟು, ಆ ಬಗ್ಗೆ ಜಂಭದಿಂದ ಹೇಳಿಕೊಳ್ಳುತ್ತಿರುವುದನ್ನು ಕಂಡಾಗ ನಗಬೇಕೊ, ಮರುಕ ಪಡಬೇಕೊ ತಿಳಿಯದಾಯಿತು!

04 December 2012

ಶಿಕ್ಷಣವೆಂಬ ಭಾರೀ ಬಿಸ್‌ನೆಸ್ಸು...




ಕಾಲವೊಂದಿತ್ತು.. ವಿದ್ಯೆಯು ಒಂದು ಮಹಾದಾನವಾಗಿದ್ದ ಕಾಲ ಒಂದಿತ್ತು.. ಗುರುವು ತನ್ನ ಜ್ಞಾನವನ್ನು ದಾನವಾಗಿ ಧಾರೆಯೆರೆಯುತ್ತಿದ್ದ ಕಾಲವದು. ಪ್ರತಿಫಲಾಪೇಕ್ಷೆಯಿಲ್ಲದ ನಿಸ್ವಾರ್ಥ ಸೇವೆಯಾಗಿತ್ತದು. ಶಿಷ್ಯನು ತನ್ನ ಶಕ್ತ್ಯಾನುಸಾರ ಗುರುದಕ್ಷಿಣೆ ನೀಡಿದರೆ ಸಾಕಿತ್ತು. ಗುರುವಿನ ಕುರಿತಾದ ಗೌರವಾದರಗಳೂ ಶ್ರೇಷ್ಠಮಟ್ಟದಲ್ಲಿದ್ದವು.

ಕಾಲಕಳೆದಂತೆ ಶಾಲೆಗಳು ತೆರೆದು ಶಿಕ್ಷಣದ ಹರವು ಹೆಚ್ಚಾಗುತ್ತಾ ಬಂತು. ನಿಯಮಿತವಾದರೂ ಕೈಗೆಟುಕುವ ಶುಲ್ಕದಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿತ್ತು. ಈಗಲೂ ಸರ್ಕಾರಿ ಶಾಲೆಗಳಲ್ಲಿ ಅಂಥ ಶಿಕ್ಷಣ ದೊರೆಯುತ್ತಿದೆ. ಆದರೆ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವುದು ನಮ್ಮ ಸಮಾಜದ ನಾಗರಿಕರ ಮರ್ಯಾದೆಗೆ ಕಡಿಮೆಯಾಗುತ್ತಲ್ಲ..?! ಹಾಗಾಗಿ ತಮ್ಮ ಮಕ್ಕಳನ್ನು ’ಅತ್ಯುತ್ತಮ’ ಖಾಸಗಿ ಶಾಲೆಗಳಿಗೆ ಸೇರಿಸುವ trend ಪ್ರಾರಂಭವಾಯ್ತು. ಅದರಲ್ಲೂ ತಮ್ಮ ಮಕ್ಕಳು ಇಂಟರ್‌ನ್ಯಾಶನಲ್ ಸ್ಕೂಲೋ, ಟೆಕ್ನೋ ಸ್ಕೂಲ್‌ನಲ್ಲೋ ಕಲಿತರೆ ಅತಿಬುದ್ಧಿವಂತರಾಗಿ, ಮುಂದೆ ನೋಬೆಲ್ ಪ್ರೈಜ್ ತಗೊಳ್ತಾರೆ ಅನ್ನೋ ಭ್ರಾಂತಿ!

ಪೋಷಕರ ಈ ಭ್ರಾಂತಿಯು ಹೊಸತೊಂದು ’ಬ್ಯುಸಿನೆಸ್’ನ ಉದಯಕ್ಕೆ ನಾಂದಿಯಾಯ್ತೇನೊ! so called ಮೌಲ್ಯಿಕ ಶಿಕ್ಷಣ ಸಾಮಾನ್ಯ ವರ್ಗದವರ ಕೈಗೆಟುಕದ ಮಟ್ಟಕ್ಕೆ ಏರಿಬಿಟ್ಟಿತು. ಬೆಂಗಳೂರೆಂಬ ಮಹಾನಗರದಲ್ಲಿ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳ ಶುಲ್ಕ ಎಷ್ಟೆಂದು ಕೇಳಿದ್ರೆ ಆಶ್ಚರ್ಯವಾಗುತ್ತೆ! ವರ್ಷಕ್ಕೆ 70-80 ಸಾವಿರ ರುಪಾಯಿಗಳು! ತಾಂತ್ರಿಕ ಶಿಕ್ಷಣಕ್ಕೆ ತತ್ಸಮಾನವಾದ ಶುಲ್ಕ ಪ್ರಾಥಮಿಕ ಶಿಕ್ಷಣಕ್ಕೆ!

ಕಡೆಗೂ ವಿದ್ಯೆಯ ಶ್ರೇಷ್ಠತೆಯನ್ನು ’ಶುಲ್ಕ’ದಲ್ಲಿ ಅಳೆಯುವ ಕಾಲ ಬಂತಲ್ಲ.. ಮಹಾದಾನವೆನಿಸಿದ್ದ ವಿದ್ಯೆಯನ್ನೂ ವ್ಯಾಪಾರೀಕರಣ ಮಾಡುವ ಗತಿ ಬಂತಲ್ಲ..ಛೆ, ಎಂಥಾ ವಿಪರ್ಯಾಸವಿದು!

09 August 2012

ವೇಣುಲೋಲನ ನಮಿಸುತ್ತಾ...



ಆ ಮುರಲಿಯಲ್ಲದೇನು ಮೋಡಿಯಿಹುದೋ...
ಆ ವೇಣುಗಾನದ ನಾದವದೇನು ಮಾಯೆ ಮಾಡಿಹುದೋ...
ಆ ಕೊಳಲ ಕೊರಳಲ್ಲದ್ಯಾವ ಕೋಗಿಲೆಯಿಹುದೋ...
ಅದ ಕೇಳುತ್ತಿದ್ದರೆ ಮನವಿದು ಮಿಡಿಯದಿರದು...
ಎದ್ದೆದ್ದುಬರುವ ತಲ್ಲಣಗಳೆಲ್ಲ ಅಲ್ಲೇ ಸ್ತಬ್ಧವಾಗಿಬಿಡುವವು...
ಇಂತಿರಲು,
ಆ ಅಸದಳ ನಾದದೊಡೆಯ ಶ್ರೀಕೃಷ್ಣನ ಸಾನ್ನಿಧ್ಯ ಇನ್ನೆಷ್ಟು ಹಿತವಿರಬಹುದು...
ಅವನೊಲುಮೆಯ ಕೃಪಾಕಟಾಕ್ಷದ ಮುಂದೆ ಕಷ್ಟಗಳೆಲ್ಲ ಕರಗಿಹೋದಾವು...
ಸಮ್ಮೋಹನಗೊಳಿಸುವ ಮೋಹನಗಾನಪ್ರಿಯನ ಈ ಜನುಮದಿನ...
ವಿನೀತರಾಗಿ ಆತನ ಆಶೀರ್ವಾದ ಬೇಡೋಣ...

25 October 2011

ಈ ಅಬ್ಬರ ಬೇಕೆ?



ಪಕ್ಕದ ಮನೆಯ ಪುಟಾಣಿ ಹುಡುಗನಿಗೆ ಎರಡು ದಿನಗಳಿಂದ ಖುಷಿಯೋ ಖುಷಿ. ಕಾರಣ, ಅವನ ಮನದಿಚ್ಛೆಯ ಪಟಾಕಿಗಳು ಇಂದವನ ಕೈಸೇರಿವೆ. ಉಪವಾಸ ಸತ್ಯಾಗ್ರಹಾದಿಗಳು ರಾಷ್ಟ್ರಮಟ್ಟದ ರಾಜಕಾರಣಿಗಳ ಮೇಲೆ ಪ್ರಭಾವ ಬೀರದಿದ್ದರೂ ತನ್ನ ಮನೆಯಲ್ಲಿ ಖಂಡಿತಾ ಪರಿಣಾಮಕಾರಿಯಾಗುತ್ತದೆಂಬ ಅವನ ಅಚಲ ನಂಬಿಕೆ ಇಂದು ಮತ್ತಷ್ಟು ಗಟ್ಟಿಯಾಗಿತ್ತು. ನಾಕು ದಿನಗಳಿಂದ ಹಿಡಿದ ಹಟ ಸಾರ್ಥಕವಾಗಿತ್ತು. ರಂಗು ರಂಗಿನ ಢಂ ಢಮಾರೆನ್ನುವ ಹತ್ತು ಹಲವು ಬಗೆಯ ಪಟಾಕಿಗಳು ಪುಟ್ಟ ಕೈಯಿಂದ ಬೆಂಕಿ ಕಾಣುವ ತವಕದಿ ಕಾದು ಕುಳಿತಿವೆ.

ಹಬ್ಬಗಳ ರಾಜ ಬಂದನೆಂದಾಗ, ದೀಪಗಳಷ್ಟೇ ಗಾಢವಾಗಿ ಪಟಾಕಿಗಳ ಅಬ್ಬರವೂ ನೆನಪಾಗುತ್ತದೆ. ಮಕ್ಕಳಿಗಂತೂ ದೀಪಾವಳಿಯೆಂದರೆ ಅದು 'ಪಟಾಕಿ' ಅಷ್ಟೇ ಎಂಬ ಭಾವನೆ ಬೇರೂರುವಂತಾಗಿದೆ. ಕಾರಣ ಮತ್ಯಾರೂ ಅಲ್ಲ, ನಾವೇ. ಮಗುವಿಗಿನ್ನೂ ಮಾತು ಬರುವ ಮೊದಲೇ ಪಟಾಕಿಯ ಸದ್ದು ಪರಿಚಿತವಾಗುವಂತೆ ಮಾಡುತ್ತೇವೆ ನಾವು. ಅದು ಬೆಳೆದಂತೆ ಪಟಾಕಿಗಾಗಿ ಹಟ ಮಾಡುತ್ತದೆ. ಅದರಿಂದಾಗಬಹುದಾದ ಅನಾಹುತಗಳ ಬಗ್ಗೆ ವಿವೇಚಿಸುವಷ್ಟು ದೊಡ್ಡ ಮನಸ್ಸೇನೂ ಅದರದಾಗಿರುವುದಿಲ್ಲ ತಾನೆ?
ಮಕ್ಕಳಿಗೆ ಹಬ್ಬದ ಮಹತ್ವ, ಹಿನ್ನೆಲೆ ಇತ್ಯಾದಿಗಳನ್ನು ವಿವರಿಸುವ ಬದಲು, ಹಣವನ್ನೇ ಸುಡುವುದನ್ನು ಹೇಳಿಕೊಡುತ್ತೇವೆ. ಲಕ್ಷ್ಮಿ ಪೂಜೆ ಮಾಡಿಯಾದರೂ ಏನು ಪ್ರಯೋಜನ ಹೇಳಿ?
ಪ್ರತಿ ವರ್ಷ ಪಟಾಕಿ ಸಿಡಿತದಿಂದಾಗಿ ಗಾಯಗೊಂಡವರ, ಕಣ್ಣು-ಕೈ-ಕಾಲು ಕಳಕೊಂಡವರ ಆಕ್ರಂದನ ಹೆಚ್ಚಾಗುತ್ತಲೆ ಇದೆಯಷ್ಟೆ. ಕೆಟ್ಟ ಮೇಲೂ ಬುದ್ಧಿ ಕಲಿವ ಬುದ್ಧಿಯೂ ನಮಗಿಲ್ಲದಾಗಿಹೋದ್ದು ವಿಪರ್ಯಾಸ..!  

08 March 2011

ಮಹಿಳಾ ದಿನ

"ಅಮ್ಮಾ.. ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು..
ಮಿಡುಕಾಡುತಿರುವೆ ನಾನು..."
ಕವಿ ಬಿ.ಆರ್.ಲಕ್ಷ್ಮಣ್ ರಾವ್ ಅಮ್ಮನ ಬಗ್ಗೆ ಎಷ್ಟು ಚೆನ್ನಾಗಿ ಬರ್ದಿದಾರಲ್ವ..
ಅಮ್ಮ ಅಂದ್ರೆ ಮಮತೆಯ ಕಡಲು, ಅಮ್ಮ ಅಂದ್ರೆ ಪ್ರೇಮದಾಗರ, ಅಮ್ಮ ಅಂದ್ರೆ ಸಹನೆ, ತಾಳ್ಮೆ, ಅಮ್ಮ ಅಂದ್ರೆ ಎಲ್ಲವೂ...
ಹೌದು, ಅಮ್ಮನ ಬಗ್ಗೆ ನಾಕಾರು ಹಗುರ ಪದಗಳ ಮಿತಿಯಲ್ಲಿ ವಿಸ್ತರಿಸಿ ವಿವರಿಸೋದು ಕಷ್ಟ. ಇದ್ದಕ್ಕಿದ್ದ ಹಾಗೆ ಅಮ್ಮನ ಬಗ್ಗೆ ಬರೀಬೇಕು ಅಂತನ್ಸಿದ್ದು ಈ ವಿಶ್ವ ಮಹಿಳಾ ದಿನ ಅಂತಂದಾಗ. ಒಬ್ಬ ಪರಿಪೂರ್ಣ ಮಹಿಳೆ ಅಂದ್ರೆ ಆಕೆ 'ಅಮ್ಮ'ನೇ ಅಲ್ವ? ಹುಟ್ಟಿದಲ್ಲಿಂದ ಹಲವಾರು ಬದಲಾವಣೆಗಳಿಗೆ ಹೊಂದಿಕೊಂಡು ಬಾಳಿ-ಬಾಳಿಸಿದವಳವಳು.

ನಮ್ಗೆ ಪೆಟ್ಟಾದ್ರೆ ನಮ್ಗಿಂತ್ಲೂ ಹೆಚ್ಚು ನೋವಾಗೋದು ಅಮ್ಮನಿಗೆ. ನಾವು ಊಟ ಮಾಡ್ದೆ ಹೋದ್ರೆ ತಲೆನೋವಾಗೋದು ಅಮ್ಮನಿಗೆ. ನಾವು ಹುಷಾರಿಲ್ದೆ ಆದ್ರೆ ನಿದ್ದೆ ಬರ್ದಿರೋದು ಅಮ್ಮನಿಗೆ. ಜೀವನಪೂರ್ತಿ ಮನೆಯ-ಮಕ್ಕಳ ಬಗ್ಗೇನೇ ಆಲೋಚನೆ ಮಾಡೋ ಅಮ್ಮನಿಗೆ ಮಿಗಿಲಾದ ನಿಸ್ವಾರ್ಥ ಮನೋಭಾವ ಬೇರೆಲ್ಲಿದ್ದೀತು?

ಅಂಥ ಅಮ್ಮನಿಗೆ... ಅಂಥ ಅಮ್ಮನ ಹೃದಯವಂತಿಕೆಯಿರುವವರೆಲ್ಲರಿಗೆ ಮಹಿಳಾ ದಿನದ ಶುಭಾಶಯಗಳು.

13 January 2011

ಪುಟ್ಟಬಾಲೆಯ ಬಲಿಗೆ ಯಾವ ದೈವವದು ಒಲಿದೀತು?



ಹೇಳಿಕೇಳಿ ಇನ್ನೂ ಮೂರರ ಹರೆಯ. ಈ ಕ್ರೂರ ಪ್ರಪಂಚ ಏನು ಅಂತ ತಿಳಿಯೋ ಮೊದ್ಲೇ ಆ ಪುಟ್ಟ ಜೀವ ಇಹ ಲೋಕದ ಪ್ರಯಾಣ ಮುಗಿಸಿಯಾಗಿತ್ತು. ಆ ಎಳೆದೇಹ ಕಲ್ಲುಮುಳ್ಳುಗಳ ನಡುವೆ 'ಮೃತದೇಹ'ವಾಗಿ ಬಿದ್ದಿರೋದನ್ನು ನೋಡಿದ್ರೆ ಎಂಥವರಿಗೂ ಕಣ್ಣಲ್ಲಿ ನೀರು ಬಂದೀತು. ಕಂದನ ತುಂಟತನವನ್ನು, ಬಾಲಿಶ-ಚುರುಕು ಮಾತುಗಳನ್ನು ಕೇಳುತ್ತ ಖುಷಿ ಪಡ್ತಾ ಇದ್ದ ಅದರ ಅಪ್ಪ-ಅಮ್ಮನ ವೇದನೆಯದು ಅನಂತ. ನಿಷ್ಕಾರಣವಾಗಿ ಒಂದು ಮುಗ್ಧಜೀವ ಬಲಿಯಾಗಿ ಹೋಯ್ತಂದ್ರೆ ಯಾರಿಗೆ ತಾನೆ ದುಃಖವಾಗ್ಲಿಕ್ಕಿಲ್ಲ... ಆ ಪುಟಾಣಿ ಜೀವವನ್ನು ಬಲಿತಗೊಂಡು ಒಲಿಯುವ ಮನಸ್ಸು ಯಾವ ದೈವಕ್ಕೂ ಇರ್ಲಿಕ್ಕಿಲ್ಲ...


ಹೌದು ನಾನು ಹೇಳ್ತಾ ಇರೋದು, ಮೊನ್ನೆ ತಾನೆ ನಮ್ಮ ಮಂಗಳೂರಿನಲ್ಲಿ ವಾಮಾಚಾರದ ಭೂತಕ್ಕೆ 'ಬಲಿ'ಯಾದ ಪ್ರಿಯಾಂಕಾಳ ಬಗ್ಗೆ. ಒಂದು ದಿನ ಪೂರ್ತಿ 'ಬ್ರೇಕಿಂಗ್ ನ್ಯೂಸ್' ಆಗಿ ಮಾಧ್ಯಮಗಳಲ್ಲಿ ಬಿತ್ತರವಾದ ಆ ಸುದ್ದಿಯದ್ದು ಆಮೇಲೆ ಸುದ್ದಿಯೇ ಇಲ್ಲ. ಆಳುವ, ಕಾಯುವ ನಾಯಕರಿಗೆಲ್ಲ ಚುನಾವಣೆಯ ಬಿಸಿ. ಆ ಕುರಿತಾದ 'ಗಾಸಿಪ್'ಗಳಿಗೆ ಪ್ರಚಾರ ಕೊಡುವ ಭರಾಟೆಯಲ್ಲಿ ಮಾಧ್ಯಮಗಳಿಗೂ ಪುರುಸೊತ್ತಿಲ್ಲ.

ದೂರದ ಬಿಹಾರದಿಂದ ಇಲ್ಲಿ ಬಂದು ನೆಲೆಸಿದ ಆ ಕುಟುಂಬಕ್ಕೆ ನಮ್ಮ ಬಗ್ಗೆ ಎಂಥಾ ಕೆಟ್ಟ ಭಾವನೆ ಬಂದಿರ್ಬಹುದಲ್ಲ.. ನಮ್ಮೂರಿನ ಬಗೆಗಿನ ಆ ಕಪ್ಪು ಚುಕ್ಕೆ ಇನ್ನೆಂದೂ ಹೋಗ್ಲಿಕ್ಕಿಲ್ಲ.

ವಿಜ್ಞಾನ-ತಂತ್ರಜ್ಞಾನದಲ್ಲಿ ತೀವ್ರ ಪ್ರಗತಿ ಕಾಣ್ತಾ ಇರೋ ಈ ಹೈಟೆಕ್ ಶತಮಾನದಲ್ಲೂ ವಾಮಾಚಾರ, ನರಬಲಿ ಎಲ್ಲ ನಡೀತಿದೆ ಅಂದ್ರೆ ಏನರ್ಥ? ನಮ್ಮ ಮೂಲ ನಂಬಿಕೆಗಳ ಅರ್ಥವನ್ನು ಅನರ್ಥ ಮಾಡಿ ಮೂಢ ಆಚರಣೆಗಳನ್ನು ಈಗಲೂ ಪಾಲಿಸುವವ್ರಿಗೆ ಏನು ಹೇಳೋಣ? ಇನ್ನೂ ಚಿಗುರುತ್ತಿರೋ ಆ ಎಳೆ ಕುಡಿಯನ್ನು ಕೊಂದು ಹಾಕಿದ ಆ ವಿಕೃತ ಮನಸ್ಸು ಅದೆಷ್ಟು ಕಟುಕವಾಗಿರ್ಬಹುದಲ್ಲ..? ನಿಜವಾಗಿ ನೋಡಿದ್ರೆ, ಅವನಿಗೆ ನೇಣು ಶಿಕ್ಷೆಯೂ ಸಾಲದು! ಅವನೋ ಮುದುಕ. ನಮ್ಮ ನ್ಯಾಯಾಧಿಕರಣದಲ್ಲಿ ವಿಚಾರಣೆ-ವಿವರಣೆಗಳೆಲ್ಲ ಮುಗಿದು ತೀರ್ಪು ಬರುವ ಹೊತ್ತಿಗೆ ಆತ ಖಂಡಿತಾ ಪ್ರಾಕೃತಿಕವಾಗಿಯೇ ಸತ್ತು ಹೋಗಿರ್ತಾನೆ. ಮತ್ತೆಲ್ಲಿಯ ಶಿಕ್ಷೆ ಹೇಳಿ...

ತಪ್ಪಿತಸ್ಥ ಸಿಕ್ಕಿಹಾಕಿಕೊಂಡ ಮೇಲೆ ಅವರಿವರನ್ನೆಲ್ಲ ಕೊಲೆಯ ಭಾಗಿಗಳಾಗಿ ಮಾಡಹೊರಟ. ಆಸ್ತಿವಿವಾದವೋ ಮತ್ತೊಂದೋ ಕಾರಣಗಳು ಹಲವು. ಅಂತೂ ಎಳೆಚಿಗುರೊಂದು ಕಮರಿಹೋದದ್ದಂತೂ ಸತ್ಯ. ಅದನ್ನು ಕಣ್ಣಾರೆ ಕಂಡು ನಾವೆಲ್ಲ ಕೈಕಟ್ಟಿ ಕುಳಿತಿರ್ಬೇಕಾಗಿರೋದೂ ಅಷ್ಟೇ ಸತ್ಯ!

14 August 2010

ಮಾಲ್‌ಗಳೆಂಬ ಮಾಯಾವಿಗಳು



 ದಿನಬಳಕೆಯ ಎಲ್ಲಾ ವಸ್ತುಗಳೂ ಸ್ವಚ್ಛ ಸುಂದರ ಸುಸಜ್ಜಿತವಾದ ಒಂದೇ ಸೂರಿನಡಿಯಲ್ಲಿ ಲಭ್ಯ. ಸಾವಿರಾರು ವಾಹನಗಳಿಗೆ ಅಚ್ಚುಕಟ್ಟಾದ ಪಾರ್ಕಿಂಗ್ ಸೌಲಭ್ಯ. ಮನೋರಂಜನೆಗೆ ಐಶಾರಾಮಿ ಚಿತ್ರಮಂದಿರಗಳು, ಆಟ, ಈಜಾಟಕ್ಕೂ ಅವಕಾಶ. ಹೊಟ್ಟೆ ಹಸಿವು ತಣಿಸಲು ಬಗೆ ಬಗೆಯ ರೆಸ್ಟೋರೆಂಟ್‌ಗಳು. - ಇವೆಲ್ಲ ಕೋಟಿಗಟ್ಟಲೆ ಬಂಡವಾಳ ಹೂಡಿ ಅದರ ದುಪ್ಪಟ್ಟು ಲಾಭ ಪಡೆವ ಶಾಪಿಂಗ್ ಮಾಲ್‌ಗಳ ಕಮಾಲ್! ಕಾಸಿದ್ದವ್ರಿಗೆ ಅದುವೇ ಕೈಲಾಸ!

೨೦೦೫ರಲ್ಲಿ ಭಾರತಕ್ಕೆ ಕಾಲಿರಿಸಿದ ಮಾಲ್‌ಗಳು ೨೦೦೯ರ ವೇಳೆಗೆ ನಾಲ್ಕುನೂರಕ್ಕೂ ಮೀರಿ ಬೆಳೆದು ನಿಂತಿವೆ.
ನಮ್ಮ ಬೆಂಗಳೂರಿನಲ್ಲಿ ಏಷ್ಯಾದಲ್ಲೇ ಅತೀ ದೊಡ್ಡ ಶಾಪಿಂಗ್ ಮಾಲ್ ಇದ್ಯಂತೆ. ಅಬ್ಬ ಎಷ್ಟು ಹೆಮ್ಮೆಯಿಂದ ಹೆಳ್ಕೊಳ್ತೇವೆ ನಾವು! ಆದ್ರೆ ಈ ಮಾಲ್‌ಗಳಿಂದಾಗಿ ಅದೆಷ್ಟು ಜನರ ಹೊಟ್ಟೆಗೆ ಏಟು ಬಿದ್ದಿರ್ಬಹುದು ಅಂತ ಯೋಚ್ನೆ ಮಾಡ್ತೇವಾ? ನೂರಾರು ಕಿರಾಣಿ ಅಂಗಡಿಗಳು, ತರಕಾರಿ ಗಾಡಿಗಳು, ಪುಟ್ಟ ಪುಟ್ಟ ಹೋಟೆಲ್‌ಗಳು ವ್ಯಾಪಾರವಿಲ್ದೆ ಬಸವಳೀತಾ ಇವೆ. ಇದ್ರ ಪರೋಕ್ಷ ಹೊಡೆತ ರೈತರ ಮೇಲೂ ಆಗುತ್ತೆ, ಖಂಡಿತ. ಒಂದಷ್ಟು ಜನ್ರಿಗೆ ಉದ್ಯೋಗಾವಕಾಶವೇನೋ ಸಿಕ್ಕಿರ್ಬಹುದು. ಆದ್ರೆ ಇನ್ನುಳಿದವ್ರ ಗತಿ?!

ಬಿಡುವಿಲ್ಲದ ದುಡಿಮೆಯ ಈ ಕಾಲದಲ್ಲಿ ಜನರು ಬಯಸೋದೂ ಇಂಥದ್ದನ್ನೇ. ಎಲ್ಲವೂ ಒಂದೇ ಕಡೆ ಸಿಗೋ ವ್ಯವಸ್ಥೇನೆ ಒಳ್ಳೆದು, ಸುಮ್ನೆ ಅಲೆಯೋ ಕೆಲ್ಸ ಇಲ್ವಲ್ಲ ಅಂತ. ಮತ್ತೆ ಕೆಲವ್ರಿಗೆ ಶಾಪಿಂಗ್ ಮಾಲ್‌ಗಳಲ್ಲಿ ಶಾಪಿಂಗ್ ಮಾಡೋದು ಒಂದು ಪ್ರತಿಷ್ಠೆ. ಒಟ್ಟಿನಲ್ಲಿ ಇಂಥ ಒಂದು ಬೆಳವಣಿಗೆಗೆ ನಾವೇ ಮೂಲ ಪ್ರೇರಣೆ, ಅಲ್ವಾ?

ನಮ್ಮ ಊರಲ್ಲೆಲ್ಲ ವಾರಕ್ಕೊಮ್ಮೆ ಸಂತೆ ನಡಿಯುತ್ತೆ. ಅಲ್ಲೂ ಹೀಗೇನೇ, ದಿನಬಳಕೆಗ್ ಬೇಕಾದ್ದೆಲ್ಲ ಸಿಗುತ್ತೆ. ನ್ಯಾಯಯುತವಾದ ಬೆಲೆಗೆ, ಯಾರಿಗೂ ಏನೂ ಅನ್ಯಾಯವಾಗದ ರೀತಿಯಲ್ಲಿ. ಅದು ವಾರಕ್ಕೊಮ್ಮೆ ನಡಿಯೋದು. ಆದ್ರೆ ಇದು ಪ್ರತಿ ದಿನವೂ. ಅಲ್ಲಿ ರೈತರೇ ಅಥವಾ ಉತ್ಪಾದಕರೇ ಸ್ವತಃ ಬಂದು ತಮ್ಮ ವಸ್ತುಗಳನ್ನು ಮಾರ್ತಾರೆ. ಇಲ್ಲಿ ಕೇವಲ 'ಬ್ರಾಂಡೆಡ್' ಕಂಪೆನಿಗಳು ಮಾತ್ರ. ಎಷ್ಟು ಅಜಗಜಾಂತರ ಅಲ್ವಾ?       

ಮಾಲ್‌ಗಳನ್ನು ಮಾಡ್ಲಿ ಪರ್ವಾಗಿಲ್ಲ. ಆದ್ರೆ ಅಲ್ಲಿ ನಮ್ಮವರಿಗೇನೆ ಅವಕಾಶ ಕೊಡ್ಬೇಕು. ದೊಡ್ಡ ದೊಡ್ಡ ವಿದೇಶಿ ಕಂಪೆನಿಗಳನ್ನು ಕಡಿಮೆ ಮಾಡಿ, ಹೊರಗಡೆ ಸಣ್ಣ ಪುಟ್ಟ ವ್ಯಾಪಾರ ಮಾಡುವ ನಮ್ಮವರನ್ನೇ ಒಳಕರೀಬೇಕು.. ಹಾಗಾದಾಗ ಆ ಅಭಿವೃದ್ಧಿಗೂ ಒಂದು ಅರ್ಥ ಬರುತ್ತೆ. ಏನಂತೀರಿ?

17 June 2010

ಇದು ಯಾವ ನ್ಯಾಯ?



೧೯೮೪, ಡಿಸೆಂಬರ್ ೨ರ ಮಧ್ಯರಾತ್ರಿ. ಭಾರತದ ಮಧ್ಯಭಾಗದಲ್ಲಿರುವ ಮಧ್ಯಪ್ರದೇಶದ ರಾಜಧಾನಿ ಭೋಪಾಲ್. ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ಉದ್ಯಮಿಗಳ ವರೆಗೆ ಎಲ್ಲರೂ ದಣಿದು ಮನೆಸೇರಿ ಮಲಗಿದ್ರು. ಪುಟ್ಟ ಪುಟಾಣಿ ಮಕ್ಕಳೆಲ್ಲ ಸಿಹಿನಿದ್ದೆಯಲ್ಲಿ ಸವಿಗನಸು ಕಾಣ್ತಾ ಇದ್ರು. ಆಗಲೇ ಸುಳಿ ಸುಳಿದು ಬಂದಿತ್ತು, ಸದ್ದಿಲ್ಲದೆ ಸೋರಿಹೋದ ವಿಷಾನಿಲ ಮೃತ್ಯುರೂಪದಲ್ಲಿ! ಒಂದಲ್ಲ ಎರಡಲ್ಲ ಹದಿನೈದು ಸಾವಿರ ಜೀವಗಳು! ಮರುದಿನದ ಬೆಳಗನ್ನು ನೋಡದೇ ಕಣ್ಮುಚ್ಚಿದವು! ಮತ್ತಷ್ಟು ಸಾವಿರ ಜನ ಅಂಗಾಂಗ ಊನಗೊಂಡು ಹೀನಾಯ ಸ್ಥಿತಿ ತಲುಪಿದ್ರು. ಅದರ ಪರಿಣಾಮದ ಖಾಯಿಲೆಗಳು ಈಗಲೂ ಅನುವಂಶಿಕವಾಗಿ ಬಂದು ಕಾಡ್ತಾ ಇವೆ.
ಇಷ್ಟೆಲ್ಲ ಅನಾಹುತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಪೆಸ್ಟಿಸೈಡ್ಸ್ ಕಾರ್ಖಾನೆಯ ಮುಖ್ಯಸ್ಥವರ್ಗದವರಿಗೆ ಸಿಕ್ಕಿದ್ದು ಕೇವಲ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ೧ ಲಕ್ಷ ರೂ ದಂಡ. ಅದೂ ೨೪ ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ!
ಹದಿನೈದು ಸಾವಿರ ಜೀವಗಳ ಬೆಲೆ ಇಷ್ಟೇನಾ??! 

ಶಿಕ್ಷೆ ಘೋಷಣೆಯಾದ ತಕ್ಷಣವೇ ಶಿಕ್ಷೆಯಾದ ಎಲ್ಲರೂ ಜಾಮೀನಿಗೆ ಅರ್ಜಿ ಸಲ್ಲಿಸಿ, ೨೫೦೦೦ ರೂ ಭದ್ರತಾ ಮುಚ್ಚಳಿಕೆ ಪಡ್ಕೊಂಡು ಜಾಮೀನು ಪಡ್ಕೊಂಡೇ ಬಿಟ್ರಂತೆ!
ಇದೆಲ್ಲ ಬದಿಗಿರ್ಲಿ. ದುರಂತಕ್ಕೆ ಪ್ರಮುಖ ಕಾರಣಕರ್ತನಾದ ವಾರೆನ್ ಆ‍ಯ್ಂಡರ್‌ಸನ್ ವಿರುದ್ಧ ಯಾವುದೇ ಪ್ರಸ್ತಾಪ ಆಗೇ ಇಲ್ಲ!
ಆತ ಅತಿಬುದ್ಧಿವಂತ. ೧೯೮೩ರ ವಾರ್ಷಿಕ ವರದಿಯಲ್ಲಿ ಭೋಪಾಲ್ ಅನಿಲ ಘಟಕ ಅಸುರಕ್ಷಿತವಾಗಿದೆ, ಕೆಲವಾರು ಸಮಸ್ಯೆಗಳಿವೆ ಎಂದು ವರದಿಯಾಗಿತ್ತು. ಆತ ಅದರ ಆಧಾರದಲ್ಲಿ ಅಮೆರಿಕಾದಲ್ಲಿರುವ ಅನಿಲ ಸ್ಥಾವರವನ್ನು ಸರಿಪಡಿಸಿದ. ಭಾರತದಲ್ಲಿ ಏನೇ ಆದ್ರೂ ಪರ್ವಾಗಿಲ್ಲ, ಅಮೆರಿಕದ ಪ್ರಜೆಗಳು ಸಾಯೊಲ್ವಲ್ಲ ಅಂತ! ತತ್‌ಪರಿಣಾಮವೇ ಈ ಭೀಕರ ದುರಂತ!
ಅಲ್ಲಿದ್ದ ಕೆಡುಕುಗಳು ಏನು ಅಂತ ಸ್ವಲ್ಪ ಗಮನಹರಿಸಿ ಅಂದೇ ಸರಿಪಡಿಸಿದ್ರೆ ಎಷ್ಟೋ ಸಾವಿರ ಸಾವು-ನೋವು ತಪ್ತಾ ಇತ್ತಲ್ವ.
ದುರಂತದ ಬಳಿಕ ಕಿಂಚಿತ್ತು ಪಶ್ಚಾತ್ತಾಪವಾದರೂ ಆಗಿದ್ಯಾ ಆ ಮನುಷ್ಯನಿಗೆ? ಊಹೂಂ. ಸರಕಾರದ ಸಹಕಾರದಿಂದ ಸರಳವಾಗಿ ತಲೆಮರೆಸಿಕೊಂಡು ಅಮೆರಿಕಕ್ಕೆ ಹಾರಿ ಹೋದ!

ಭಾರತದ ನ್ಯಾಯವ್ಯವಸ್ಥೆ ಎಷ್ಟು 'ಕರುಣಾ'ಜನಕವಾಗಿದೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?
ದೇಶದ ಪ್ರಜೆಗಳಾದ ನಾವು ಸ್ವಲ್ಪ ಯೋಚಿಸ್ಬೇಕಲ್ವ? ಈ ನ್ಯಾಯ ವ್ಯವಸ್ಥೆಗೊಂದು ಮಹತ್ವದ ಮಾರ್ಪಾದು ಬರ್ಬೇಕಲ್ವ.. ಅದಕ್ಕೇಂತ ಇವತ್ತು ಒಂದು ಅರ್ಜಿ ಸಲ್ಲಿಸಿದ್ರೆ, ಅದರ ವಿಚಾರಣೆ ಆಗಿ, ಸಾಕ್ಷ್ಯಾಧಾರಗಳ ಪರಿಶೀಲನೆ, ಮರುಪರಿಶೀಲನೆ, ವಿಚಾರಣೆ, ಮರುವಿಚಾರಣೆಗಳೆಲ್ಲ ಆಗಿ ಕೊನೆಗೊಂದು ನಿರ್ಧಾರಕ್ಕೆ ಬರೋವಾಗ ನಮ್ಮ ಮೊಮ್ಮಕ್ಕಳ ಕಾಲವಾದೀತೇನೊ...!

ಅಂತೂ ಭೋಪಾಲ್ ಅನಿಲ ದುರಂತದಲ್ಲಿ ಬಲಿಯಾದವರ ಆತ್ಮಕ್ಕೆ ಶಾಂತಿಯಿರಲಿ ಒಂದು ನಿಡಿದಾದ ಉಸಿರೂ ಬಂದಿರಲಿಕ್ಕಿಲ್ಲ.

03 May 2010

ಸದ್ದಿಲ್ಲದೆ ಸಾಗುತಿದೆ ಮತ್ತೊಂದು ಆಕ್ರಮಣಪಥ...



ಸುಮಾರು ಹತ್ತು ದಿನಗಳ ಹಿಂದೆ ಪತ್ರಿಕೆಯೊಂದರ ಅಂಕಣಬರಹವೊಂದರಲ್ಲಿ (vk,22 April,'ನೂರೆಂಟು ಮಾತು') ಇಂಥದೊಂದು ಮಾಹಿತಿ ಓದಿ ನಿಜಕ್ಕೂ ದಂಗಾಗಿ ಹೋಯ್ತು.ಈ ವಿಚಾರ ಕೇಳಿದ್ರೆ ನಿಮ್ಗೂ ಆಶ್ಚರ್ಯವಾದೀತು.
ಇಡೀ ವಿಶ್ವವನ್ನು ಆವರಿಸಿರುವ 'ಚೀನಾದ ಪರಿಣಾಮ'ದ ಕುರಿತಾದ ಲೇಖನ ಅದು. "ಅಮೇರಿಕ,ಯುರೋಪ್,ಆಫ್ರಿಕಾ ಹಾಗೂ ಆಸ್ಟ್ರೇಲಿಯಾದ ಯಾವುದೇ ದೇಶಗಳಿಗೆ ಹೋದ್ರೂ Made in china ಸಾಮನುಗಳದ್ದೇ ಕಾರುಬಾರು. ಗಮನಿಸ್ಬೇಕಾದ ಪ್ರಮುಖ ಸಂಗತಿ ಅಂದ್ರೆ ಭಾರತದ ಎಲ್ಲ ಹಳ್ಳಿ, ಮನೆಗಳನ್ನೂ ಈ Made in china ಸಾಮಾನುಗಳು ಮುಟ್ಟಿವೆ. ಮುಂದಿನ ಹತ್ತು ವರ್ಷಗಳಲ್ಲಿ ಗುಂಡುಸೂಜಿ, ಬಟನ್, ಸಾಕ್ಸ್, ಪೆನ್, ಮಗ್, ರೇಜರ್, ಬ್ಲೇಡ್, ಬಕೆಟ್‌ನಿಂದ ಹಿಡಿದು ನಾವು ಉಪಯೋಗಿಸುವ ಶೇ.65ರಷ್ಟು ವಸ್ತುಗಳು ಚೀನದಲ್ಲಿಯೇ ಉತ್ಪಾದನೆಯಗಲಿದೆ! ಇಷ್ಟೇ ಆಗಿದ್ರೆ ok.ಆದ್ರೆ ನಾವು ನಿತ್ಯ ಪೂಜಿಸೋ ದೇವರ ವಿಗ್ರಹ,ದೇವರ ಫೋಟೋ,ಕುಂಕುಮ,ಅರಿಶಿನ,ದೇವರ ಫೋಟೋಫ್ರೇಮ್,ಗಂಧದ ಮಾಲೆ, ಪ್ಲಾಸ್ಟಿಕ್ ಹೂವು,ಗಂಧ ತೇಯುವ ಕಲ್ಲೂ ಸೇರಿದಂತೆ ಪೂಜಾ ಸಾಮಗ್ರಿಗಳು ಭಾರತಕ್ಕೆ ಚೀನಾದಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಬರ್ತಾ ಇವೆಯಂತೆ!

ಅಂಕಿ-ಸಂಖ್ಯೆಗಳ ವಿವರದಲ್ಲಿ ಹೇಳೋದಾದ್ರೆ:
ಕಳೆದ ವರ್ಷ ಚೀನಾದ ಯಿವು ಎಂಬ ನಗರದಲ್ಲಿ ತಯಾರಾದ ಎಂಟು ಕೋಟಿ ವಿವಿಧ ಬಗೆಯ ಗಣೇಶನ ವಿಗ್ರಹಗಳು ಭಾರತಕ್ಕೆ ರಫ್ತಾಗಿದೆ.
ಸುಮಾರು ಎರಡು ಕೋಟಿ ಕೃಷ್ಣ,ಹನುಮಂತ,ತಿರುಪತಿ ವೆಂಕಟೇಶ,ಪದ್ಮನಾಭ,ಶಬರಿಮಲೆ ಅಯ್ಯಪ್ಪ ವಿಗ್ರಹಗಳು ಯಿವು ನಗರದಿಂದ ಬಂದಂಥವು.
ನಾವು ಪೂಜಿಸುವ ಈ ವಿಗ್ರಹಗಳ ಪೈಕಿ ಶೇ.55ರಷ್ಟು ಚೀನಾದಲ್ಲಿ ತಯಾರಾದವು!
ಈ ವರ್ಷವೊಂದರಲ್ಲಿಯೇ ಚೀನಾ ಹನ್ನೆರಡು ದಶಲಕ್ಷ ಟನ್ ಕುಂಕುಮವನ್ನು ಭಾರತಕ್ಕೆ ರಫ್ತು ಮಾಡಲಿದೆ.ಈ ಕುಂಕುಮ ಭಾರತದಲ್ಲಿ ಸಿಗುವುದಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತದೆಯೆಂಬುದನ್ನು ಗಮನಿಸ್ಬೇಕು.
ಕಳೆದ ಮೂರು ವರ್ಷಗಳಲ್ಲಿ ಚೀನಾ ಭಾರತಕ್ಕೆ ಕಳಿಸಿದ ಕರ್ಪೂರ ನಲುವತ್ತೊಂದು ಲಕ್ಷ ಟನ್!
ಈ ವರ್ಷ ಚೀನಾ,ಕನ್ನಡವೂ ಸೇರಿದಂತೆ ಭಾರತದ ಎಲ್ಲ್ಲಾ ಭಾಷೆಗಳಲ್ಲಿ ಮುದ್ರಿಸಿದ ಸುಮಾರು ಮುನ್ನೂರು ಪುಟಗಳನ್ನು ಒಳಗೊಂಡ ನಾಲ್ಕು ಕೋಟಿ 'ಭಗವದ್ಗೀತೆ'ಯ ಪ್ರತಿಗಳನ್ನು ನಮ್ಮಲ್ಲಿಗೆ ಕಳುಹಿಸಲು ನಿರ್ಧರಿಸಿದ್ಯಂತೆ!


ಇದು ಹೀಗೇ ಮುಂದುವರಿದ್ರೆ ಇನ್ನು ಒಂದೆರಡು ವರ್ಷಗಳಲ್ಲಿ ಭಾರತದ ಎಲ್ಲ ದೇಗುಲಗಳಲ್ಲಿನ, ಎಲ್ಲರ ಮನೆ ಪೂಜಾಕೋಣೆಯಲ್ಲಿನ ವಸ್ತುಗಳೆಲ್ಲ Made in China ಆಗೋದು ಖಚಿತ."

"ಅಬ್ಬ ಚೀನಾದ ಸಾಧನೆಯೇ!" ಅಂತ ನಾವು ಮೂಗುಮುರಿದು ಬೆರಗಾಗಿ ಕಣ್‌ಕಣ್ ಬಿಡೋ ಹೊತ್ಗೆ ಚೀನಾ ನಮ್ಮ ಜೀವನದ ಮೂಲವನ್ನು ಅಲುಗಾಡಿಸಿಬಿಟ್ಟಿರುತ್ತೆ. ಖಂಡಿತ ನಾವು ಈಗ ಎಚ್ಚೆತ್ಕೊಳ್ಳೇಬೇಕು. ಇಷ್ಟೊಂದು ದೊಡ್ಡಮಟ್ಟಿನ ವಹಿವಾಟು ಚೀನಾಕ್ಕೆ ಸಿಗ್ಬೇಕಾದ್ರೆ ಅದ್ಕೆ ನಮ್ಮವ್ರೇ ಕಾರಣ ತಾನೆ..? ನಾವು order ಕೊಟ್ರೇನೆ ತಾನೆ ಅವ್ರು ಮಾಡೋದು.. 2020ರ ಹೊತ್ಗೆ ಭಾರತ ನಂಬರ್ ವನ್ ಆಗುತ್ತೇಂತ ಕನಸು ಕಾಣ್ತಾ, ಹಾಯಾಗಿ ನಿದ್ದೆ ಮಾಡ್ತಾ ಇದ್ರೆ 'ವ್ಯಾಪಾರಿ ಆಕ್ರಮಣ'ಗಳು ನಮ್ಮ ಅಂತಃಸ್ಸತ್ವವನ್ನೇ ಕರಗಿಸಿಬಿಡುತ್ವೆ. ನಮ್ಮಲ್ಲಿನ ಸ್ವ-ಉದ್ಯೋಗ, ಗುಡಿಕೈಗಾರಿಕೆಗಳು ಹೇಳಹೆಸರಿಲ್ಲದಂತೆ ಮಾಯವಾಗಿ ಬಿಡುತ್ವೆ. ಮತ್ತೊಮ್ಮೆ ದಾಸ್ಯದ ಬಲೆಗೆ ಸಿಲುಕಿಕೊಳ್ಳೋ ಮೊದ್ಲು ಜಾಗೃತರಾಗೋಣ. ಜಾಗೃತರಾಗ್ಲೇಬೇಕು.. ಅಲ್ವ..?

02 March 2010

ತಪ್ಪು ಯಾರದ್ದು. . .??



ಸ್ನೇಹಿತ್ರೆ, ಕಳ್ದ ಕೆಲವು ತಿಂಗಳುಗಳಿಂದ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವ ಒಂದು so called 'ರಿಯಾಲಿಟಿ ಶೋ'ದ ಬಗ್ಗೆ ಹೇಳಲೇಬೇಕನಿಸ್ತು.  ಮೇಲ್ನೋಟಕ್ಕೆ ಅದೊಂದು ಉತ್ತಮ ಕೌನ್ಸಿಲಿಂಗ್ ಕಾರ್ಯಕ್ರಮದ ಹಾಗೆ ಭಾಸವಾಗುತ್ತೆ.  ಅಥವ ಆ ರೀತಿ ಭಾಸವಾಗುವಂತೆ ತೋರ್ಪಡಿಸ್ತಾರೆ.  ಅವರು ಹೇಳೋ ಪ್ರಕಾರ ಅವರ ಉದ್ದೇಶ ನೊಂದ ಮನಗಳಿಗೆ ಸಾಂತ್ವನ ಹೇಳೋದು, ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸೋದು, ಮನಸ್ತಾಪಗಳನ್ನು ದೂರೈಸಿ ನೆಮ್ಮದಿ ನೀಡೋದು ಇತ್ಯಾದಿ
ಇತ್ಯಾದಿ...  ಈ ಬಣ್ಣದ ಮಾತುಗಳಿಗೆ ಮರುಳಾಗಿ ಹಲವಾರು ಜನ, ನಮ್ಮ ಸಮಸ್ಯೆಗಳೂ ಬಗೆಹರಿದಾವು ಎಂಬ ಆಶಾಭಾವದಿಂದ ಈ ಚಾನೆಲ್ ಗಳ ಮೊರೆಹೋಗ್ತಾರೆ.      

ಆದರೆ ಅವರು ಮಾಡೋದೇನು....?  ಸಂಸಾರದ ನಾಲ್ಕು ಗೋಡೆಗಳ ಮಧ್ಯೆಯೇ ಬಗೆಹರಿಯಬೇಕಾದಂಥ ಸಮಸ್ಯೆಗಳನ್ನು ಜಗಜ್ಜಾಹೀರು ಮಾಡಿ, ವೀಕ್ಷಕರ ಹತ್ರ "ಇಲ್ಲಿ ತಪ್ಪು ಯಾರದ್ದು..?" ಅಂತ ಕೇಳ್ತಾರೆ.  ಇಲ್ಲಿ ತಪ್ಪು ಮತ್ತ್ಯಾರದ್ದೂ ಅಲ್ಲ, ಆ ಚಾನೆಲ್ ನವರದ್ದೇ.  ಗಂಡ-ಹೆಂಡತಿ, ಅತ್ತೆ-ಸೊಸೆ, ಅಣ್ಣ-ತಮ್ಮ, ತಂದೆ-ಮಗ ಕಚ್ಚಾಡುವುದನ್ನೇ ಒಂದು 'ಕಾರ್ಯಕ್ರಮ' ಅಂತ ಮಾಡಿ ತೋರಿಸ್ತಾರಲ್ಲ ಏನೆನ್ನಬೇಕು ಇದಕ್ಕೆ....ಕೊನೆಗೆ ಅವರಿಗೆ ತಾವೇ ಸಾಂತ್ವನ ಹೇಳಿ, ಅವರ ಸಮಸ್ಯೆಯನ್ನು ತಾವೇ ಬಗೆಹರಿಸಿದ್ದೇವೇಂತ ಪೋಸು ಕೊಡ್ತಾರೆ.  ಸಮಸ್ಯೆ ಬಗೆಹರಿಸುವ ಒಳ್ಳೆ ಮನಸ್ಸು ಇದ್ರೆ, ಅವರ ಸ್ಟುಡಿಯೊದೊಳ್ಗಡೆನೇ ಒಂದು ಕೌನ್ಸಿಲಿಂಗ್ ಮಾಡಿ, ಮನಸ್ತಾಪ ಪರಿಹರಿಸ್ಬಹುದಲ್ಲ... ಅದನ್ನು ಚಿತ್ರೀಕರಿಸಿ ಊರೆಲ್ಲ ಪ್ರಚಾರ ಮಾಡೋ ಅಗತ್ಯ ಇದ್ಯಾ?  ಈ ರೀತಿ ಮಾಡೋದ್ರಿಂದ ಆ ಸಂಸಾರದ ಮಾನ, ಮರ್ಯಾದೆ ಬೀದಿಪಾಲಾಗುತ್ತೆ ಅನ್ನುವ ಕನಿಷ್ಟ ಜ್ಞಾನ ಕೂಡ ಇವ್ರಿಗೆ ಇಲ್ವ...?!  ಮುಂದೆ ಅವರು ಸರಿಯಾಗಿ ಬದುಕಲು ಪ್ರಾರಂಭಿಸಿದರೂ ಸುತ್ತಲಿನ ಸಮಾಜ ಅವರನ್ನು ಯಾವ ದೃಷ್ಟಿಯಲ್ಲಿ ನೋಡೀತು...?  ಪ್ರತಿಬಾರಿಯೂ ಬೊಟ್ಟುಮಾಡಿ ತೋರಿಸಿ ನಗುವ ಜನರ ಮಧ್ಯೆ ಅವರ ಜೀವನ ಇನ್ನಷ್ಟು ನರಕಸದೃಶವಾಗೊಲ್ವೆ...?

ಮಾಧ್ಯಮಗಳು ಯಾವಾಗಲೂ ಜನಪರ ಕಾರ್ಯಕ್ರಮಗಳಿಗೆ, ಸಮಾಜದ ಏಳಿಗೆಗೆ ಒತ್ತುಕೊಡುವಂಥ ಕಾರ್ಯಕ್ರಮಗಳಿಗೆ ಮನ್ನಣೆ ನೀಡಬೇಕಲ್ಲ... ಟಿ.ಆರ್.ಪಿ ಗಿಟ್ಟಿಸುವ ಭರದಲ್ಲಿ ಜನಜೀವನಕ್ಕೆ ಮುಳುವಾಗುವಂಥ ಕಾರ್ಯಕ್ರಮಗಳನ್ನು ಹುಟ್ಟುಹಾಕೋದು ಎಷ್ಟು ಸರಿ...?

ಗುರುತು ಪರಿಚಯವೇ ಇಲ್ಲದ ನಮ್ಮನ್ನುಳಿಸೋದಕ್ಕಾಗಿ ಸಾವಿರಾರು ಯೋಧರು ಹಗಲಿರುಳು ಹೊಣೆಯುತ್ತಿದ್ದಾರೆ, ಹಿಮಪಾತಕ್ಕೆ ಬಲಿಯಾಗ್ತಿದಾರೆ.  ಅವರ ಕಷ್ಟ, ನೋವುಗಳು, ಅವರ ಕುಟುಂಬದ ಪರಿಸ್ಥಿತಿ ಇತ್ಯಾದಿಗಳ ಬಗ್ಗೆ ಯಾರೂ ಯೋಚಿಸೋದೇ ಇಲ್ಲ.  ಆ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ ಮಾಡಿದರೆ ಅಷ್ಟಾದ್ರೂ ಪುಣ್ಯ ಬಂದೀತು.  ಉಂಡು ಮಲಗುವಲ್ಲಿಗೆ ಮುಗಿಯಬೇಕಾದ ಗಂಡಹೆಂಡಿರ ಜಗಳಕ್ಕೆ ರಂಗುರಂಗಿನ ಕಥೆಕಟ್ಟಿ ಜಗಜ್ಜಾಹೀರು ಮಾಡುವ ಬದಲು ದೇಶದೇಳಿಗೆಗೆ ಪೂರಕವಾಗುವ ಕಾರ್ಯಕ್ರಮಗಳನ್ನು ಮಾಡಬಾರದೇಕೆ?

ಮೊದಲು ಇಂಥ ಕಾರ್ಯಕ್ರಮಗಳಿಗೆ ಕುಮ್ಮಕ್ಕು ನೀಡುವ ನಾವು ಎಚ್ಚೆತ್ಕೊಬೇಕು.  ಟೀವಿಯಲ್ಲಿ ಕಾಣಿಸಿಕೊಳ್ಳಬೇಕನ್ನೊ ಹುಚ್ಚುಆಸೆಯ ಬಿರುಗಾಳಿಗೆ ಸಂಸಾರ ನೌಕೆ ಬಲಿಯಾಗದಂತೆ ನೋಡಿಕೊಳ್ಬೇಕು. ಇಂಥ ಕಾರ್ಯಕ್ರಮಗಳ ವಿರುದ್ಧ ಒಕ್ಕೊರಲ ಹೋರಾಟ ನಡೀಬೇಕು.  ಅವರವರೊಳಗೆ ಬಗೆಹರಿಸಿಕೊಳ್ಳಬೇಕಾದ ಸಮಸ್ಯೆಗಳಿಗೆ ಬಹಿರಂಗ ಪ್ರಚಾರ ನೀಡಿ, ಅದನ್ನು ಮತ್ತಷ್ಟು ಉಲ್ಬಣಗೊಳಿಸುವ ಕಾರ್ಯಕ್ರಮಗಳಿಗೆ ಬಹಿಷ್ಕಾರವಿರ್ಲಿ.
ಏನಂತೀರಿ..?

16 February 2010

ಜೀವವೆಂಬುಡುಗೊರೆ....



ನಾವೆಲ್ಲ ನಮ್ ಸ್ನೇಹಿತ್ರು, ಬಂಧುಗಳು, ಆತ್ಮೀಯರು ಕೊಟ್ಟ ಉಡುಗೊರೆಗಳನ್ನು ಎಷ್ಟು ಜೋಪಾನವಾಗಿ ಎತ್ತಿಡ್ತೇವೆ! ಅವರೊಂದಿಗಿನ ಸವಿಸವಿನೆನಪುಗಳು ಆ ವಸ್ತುಗಳಿಗೊಂದು ವಿಶೇಷ ಸ್ಥಾನ ನೀಡಿರ್ತವೆ. ಕೆಲವನ್ನಂತೂ ತೀರಾ ಹಚ್ಕೊಂಡಿರ್ತೇವೆ. ಅದು ಎಲ್ಲಾದ್ರೂ ಕಳೆದು ಹೋದ್ರೆ ಏನೋ ಒಂಥರಾ ಕಸಿವಿಸಿ, ಚಡಪಡಿಕೆ. ಛೆ ಕಳ್ಕೊಂಡುಬಿಟ್ನಲ್ಲಾ ಅಂತ ಬೇಜಾರು. ಆ ವಸ್ತುವಿಗೆ ಅಂಥಾ ಬೆಲೆಯೇನೂ ಇಲ್ದಿದ್ರೂ ಅದು ಬೆಲೆಕಟ್ಟಲಾಗದ್ದಾಗಿರುತ್ತೆ. ನಿಜಾರ್ಥದಲ್ಲಿ ನೋಡಿದ್ರೆ ಅದೊಂದು ಕ್ಷುಲ್ಲಕ ವಿಚಾರ. ಆದ್ರೆ ಅಷ್ಟಕ್ಕೇ ಎಷ್ಟು ತಲೆಕೆಡಿಸಿಕೊಂಡುಬಿಡ್ತೇವಲ್ಲ...

ಸ್ನೇಹಿತ್ರೆ, ಲಕ್ಷ ಲಕ್ಷ ಜೀವಕೋಶಗಳ ವಿಶಿಷ್ಟ ಸಂಯೋಜನೆಯ ಈ ನಮ್ಮ ದೇಹ, ಅದರೊಳಗಿನ 'ಜೀವ' ನಿಜಕ್ಕೂ ನಮ್ಗೆ ದೊರೆತ ಅತ್ಯಂತ ದೊಡ್ಡ ಉಡುಗೊರೆ ಅಲ್ವಾ... ಅಗೋಚರ, ಅದ್ಭುತ ಶಕ್ತಿಯಿತ್ತ ಅತ್ಯದ್ಭುತ ಉಡುಗೊರೆಯಿದು. ಜೀವವೇ ಇಲ್ಲದ ಸಣ್ಣ ಸಣ್ಣ ವಸ್ತುಗಳ ಬಗ್ಗೆ ನಾವು ಅಷ್ಟು ಕಾಳಜಿ ತೋರಿಸ್ತೇವಂದ್ರೆ ಈ 'ಜೀವ'ಕ್ಕೆ ಇನ್ನೆಷ್ಟು ತೋರಿಸ್ಬೇಡ... ಯಾವುದೋ ಒಂದು ಹಂತದಲ್ಲಿ  ಏನೋ ಒಂದು ಹತಾಶೆಗೆ, ದುಃಖಕ್ಕೆ ನೊಂದುಕೊಂಡು ಜೀವವನ್ನೇ ಕಳ್ಕೊಳ್ಳೋದು ಎಷ್ಟು ಸರಿ..? ಕಳೆದುಹೋದ ವಸ್ತುಗಳು ಮತ್ತೆ ಸಿಕ್ಕೀತು... ಅಥವಾ ಅಂಥದ್ದೇ ಇನ್ನೊಂದನ್ನು, ಕೊಟ್ಟವರಿಂದ್ಲೇ ಮತ್ತೆ ಪಡೀಬಹುದು. ಆದ್ರೆ ಈ ಜೀವ, ಜೀವನ.... ಊಹೂಂ ಖಂಡಿತ ಮತ್ತೆ ಬರೊಲ್ಲ...

ಪರೀಕ್ಷೆಯಲ್ಲಿ ಫೇಲಾದೆ, ನನ್ನ ಆತ್ಮೀಯರು ನನ್ನ ತೊರೆದ್ರು, ನಂಗೆ ಬೇಕಾದ್ದು ಸಿಗ್ಲಿಲ್ಲ, ನಂಗೆ ಯಾರೋ ಬೈದ್ರು, ಯಾವುದೋ ಒಂದು ಕೆಲ್ಸ ಹೋಯ್ತು, ಅವಮಾನ ಆಯ್ತು - ಹೀಗೆ ಇಂಥ ಸಣ್ಣಪುಟ್ಟ ವಿಚಾರಗಳಿಗೆ ಜೀವಕ್ಕೇ ಎರವನ್ನು ತಂದುಕೊಳ್ಳೋದು ಸರೀನಾ... ಛೆ, ನಮ್ಮ ಈ 'ಜೀವ' ಅಷ್ಟು cheap ಆಗ್ಬಿಡ್ತಾ...? ಇಷ್ಟು ಸಣ್ಣ ವಿಚಾರಕ್ಕೆ ಆತ್ಮಹತ್ಯೆ ಮಾಡ್ಕೊಳ್ಳೋದಂದ್ರೆ ಈ ಆತ್ಮಕ್ಕೆ, ಈ ಜೀವಕ್ಕೆ ಏನೇನೂ ಬೆಲೆ ಇಲ್ಲ ಅಂದ ಹಾಗಾಯ್ತಲ್ಲ...

"ಸಾಕಾಗಿ ಹೋಯ್ತು...ಈ ಜೀವನವೇ ಬೇಡ" ಅಂತನ್ನಿಸೋ ಕ್ಷಣಗಳು ನೂರಾರು ಬರ್ಬಹುದು. ಆದ್ರೆ ಅದು ಕ್ಷಣಿಕ ಮಾತ್ರ. ಮರುದಿನ ಮತ್ತೊಂದು ಜೀವನಪ್ರೀತಿ ಮೊಳಕೆ ಒಡೆಯುತ್ತೆ. ಅಲ್ಲಿವರೆಗೆ ಜೀವಹಿಡಿದು ಕೂತ್ರೆ ಅಷ್ಟು ಸಾಕು. ಆಮೇಲೆ, "ಛೆ, ಎಂಥಾ ಕೆಟ್ಟ ಯೋಚ್ನೆ ಮಾಡಿದ್ದೆ.." ಅಂತನ್ನಿಸುತ್ತೆ.

ಯೋಚ್ನೆ ಮಾಡಿ, ನಿಮ್ಮವರನ್ನೂ ಯೋಚ್ನೆಗೆ ಹಚ್ಚಿ. ಬೇರೆ ಯಾವ ಪ್ರಾಣಿಗೂ ಸಿಕ್ಕದ ಅತಿಶ್ರೇಷ್ಠ ಉಡುಗೊರೆ ನಮ್ಗೆ ಸಿಕ್ಕಿದೆ. ಇರುವವರೆಗೆ, ಗಮ್ಯ ಕರೆವವರೆಗೆ ಅದನ್ನು ಕಾಪಾಡಿಕೊಂಡು, ಅದಕ್ಕೆ ನಾವೇ ಎರವಾಗದ ಹಾಗೆ 'ಜೀವಿಸು'ವುದು ಖಂಡಿತವಾಗಿ ನಮ್ಮ ಕರ್ತವ್ಯ. ಅಲ್ವ...

03 February 2010

ನಿಲ್ಲು ಸೋದರಿ...ಇಲ್ಲೊಮ್ಮೆ ಕೇಳು

[ಲವ್ ಜಿಹಾದೆಂಬ ಮಾಯಾವಿಯ ಹಿಂದೆ ಓಡಿಹೋಗುವ ಮುನ್ನ...]



 ಒಂಭತ್ತು ತಿಂಗಳು ಬಂದೆಲ್ಲ ನೋವನ್ನು ನುಂಗಿಕೊಂಡು, ತನ್ನ ಹೊಟ್ಟೆಯೊಳಗೆ ನಾಜೂಕಾಗಿ ನಿನ್ನ ರಕ್ಷಿಸಿ, ಮತ್ತೊಂದಷ್ಟು ನೋವನನುಭವಿಸಿ ಜನ್ಮನೀಡಿದಳು ಅಮ್ಮ. ಮತ್ತೆ ಮತ್ತಷ್ಟು ಪ್ರೀತಿ ವಾತ್ಸಲ್ಯದಿಂದೊಡಗೂಡಿದ ಸಮೃದ್ಧ ಪೋಷಣೆ ನೀಡಿ ಪಾಲಿಸಿದಳು ಅಮ್ಮ. ಅಷ್ಟೇ ಮಮತೆಯಿಂದ ಬೇಕಾದ್ದೆಲ್ಲ ತಂದುಕೊಟ್ಟು ಮಗಳು ಖುಷಿಯಾಗಿರ್ಲಿ ಅಂತ ನೋಡಿಕೊಂಡರು ಅಪ್ಪ. ಮಗಳು ತುಂಬಾ ಓದ್ಬೇಕು, ಸಮಾಜದಲ್ಲಿ ಒಳ್ಳೆ ಸ್ಥಾನ ಪಡೀಬೇಕು, ಸದಾ ಸಂತೋಷವಾಗಿರ್ಬೇಕು ಅಂತ ತಮ್ಮ ಜೀವ-ಜೀವನ ತೇದು ವಿದ್ಯೆ-ಬುದ್ಧಿ ನೀಡಿ ಬೆಳೆಸಿದ್ರು ಅದೇ ಅಪ್ಪ-ಅಮ್ಮ. ಇನ್ನೇನು ತಮ್ಮ ಶ್ರಮ ಸಾರ್ಥಕವಾಗ್ಬೇಕು, ಮಗಳಿಗೊಂದು ಉತ್ತಮ ಜೀವನ ರೂಪಿಸಿಕೊಡ್ಬೇಕು ಅಂತ ಹೊರಡ್ತಾ ಇರೋವಾಗ ಇದೆಂಥಾ ಬರಸಿಡಿಲು ಆ ಬಡಪಾಯಿಗಳ ಮೇಲೆ! ಈ ಅನುಬಂಧಗಳನ್ನೆಲ್ಲ ಕಡಿದುಕೊಂಡು ಅದ್ಯಾರೋ ಗೊತ್ತು ಗುರಿಯಿಲ್ಲದವನ ಹಿಂದೆ ನೀನು ಓಡಿಹೋದೆ ಅಂತ ಕೇಳಿದ್ರೆ ಆ ಹೃದಯಗಳಿಗೆ ಏನಾಗ್ಬೇಡ... ಅದೂ ಅಶಿಸ್ತಿನ ಪರಮಾವಧಿಯ, ನೀಚ, ತುಚ್ಛ, ಕಟುಕ, ಕೊಳಕು ಜನದ ಹಿಂದೆ... ಛಿ, ನಾಚಿಕೆಯಾಗೊಲ್ವ... ಎಲ್ಲಿ ಹೋಯ್ತು ನಮ್ಮ ಸಂಸ್ಕಾರ, ಸಂಸ್ಕೃತಿಯ ಪಾಠ? ಅದ್ಯಾವ ಅನಾಮಿಕ ಆಮಿಷ ನಿನ್ನ ಮನಸ್ಸನ್ನು ಸೆಳೆದುಕೊಂಡಿತು..? ಇಪ್ಪತ್ತು-ಇಪ್ಪತ್ತೆರಡು ವರ್ಷಗಳ ಕಾಲ ನಿನಗೆ ಒಂದಿನಿತು ಕಷ್ಟವಾಗದಂತೆ ಜೋಪಾನವಾಗಿ, ನಿನ್ನ ಖುಷಿಯಲ್ಲೇ ತಮ್ಮ ಖುಷಿ ಕಾಣುತ್ತಿದ್ದ ಹೆತ್ತವರು ಮಾಡಿದ ಪಾಪವಾದ್ರೂ ಏನು..? ಅವರಿಗ್ಯಾಕೆ ಇಂಥಾ ಘೋರ ಶಿಕ್ಷೆ? ಹೋಗೋ ಮೊದ್ಲು ಸ್ವಲ್ಪ ಯೋಚಿಸ್ಬೇಕಲ್ವ... ಮುಂದೆ ನಿನ್ನ ಮಗಳೂ ಹೀಗೇ ಮಾಡಿದ್ರೆ ಹೇಗಾದೀತು..? ಒಮ್ಮೆ ಕಲ್ಪಿಸ್ಕೋ ಪ್ಲೀಸ್...

ಫಾರಿನ್ ಸೆಂಟಿನ ಪರಿಮಳದ ಹಿಂದಿರುವ ನರಕದ ಬಗೆಗೆ ತಿಳಿದುಕೊಳ್ಳುವಷ್ಟು ಪ್ರಜ್ಞೆ ನಿನ್ನಲ್ಲಿದೆ ತಾನೆ..? ಡುರ್ರೆ೦ದು ಬರುವ ಯಾರದೋ ಬಾಡಿಗೆ ಮೋಟರ್ ಸೈಕಲ್ ಮೇಲೆ ನಿನ್ನ ಜೀವನ ಅದೆಷ್ಟು ದಿನ ಸುಗಮವಾಗಿ ಸಾಗೀತು..? ಮನೆ ತಲುಪೋವಾಗ ಎಷ್ಟೇ ತಡವಾದ್ರೂ ನಿನ್ ಜೊತೇನೇ ಊಟ ಮಾಡೋಕಂತ ಕಾಯ್ತಿದ್ದ ಅಮ್ಮ ಈಗ ಏನ್ ಮಾಡ್ಬೇಕು..? ನಿನ್ನ ಕಾಣದ ಅವಳಿಗೆ ಒಂದು ತುತ್ತಾದ್ರೂ ಊಟ ಸೇರೀತಾ..? ಮಗಳ ಮದುವೆಗೇಂತ ಕಷ್ಟಪಟ್ಟು ಎಷ್ಟೋ ವರ್ಷಗಳಿಂದ ಬೆವರಿಳಿಸಿ ಸಂಪಾದಿಸಿ ಹಣ ಕೂಡಿಟ್ಟ ಅಪ್ಪನಿಗೆ ಇನ್ಯಾವ ಸಂಭ್ರಮವಿದೆ..?

ಪ್ಲೀಸ್...ಒಂದೇ ಒಂದ್ಸಲ ಮನಸ್ಸಿಟ್ಟು ಆಲೋಚಿಸು. ನಿಜವಾದ ಪ್ರೀತಿ ಯಾವುದು... 'ಆಕರ್ಷಣೆ'ಯ ಬೆಂಬತ್ತಿ ಹೋಗಿ ಅಮೂಲ್ಯ ಜೀವನ ಹಾಳುಮಾಡಿಕೊಳ್ತೀಯಾ... ಅಥವಾ ನಿಜವಾದ ಪ್ರೀತಿಯೊಂದಿಗಿದ್ದು, ಇಷ್ಟು ವರ್ಷ ಸಲಹಿದ್ದಕ್ಕಾಗಿ ಅವರನ್ನು ಚಂದದಿಂದ ನೋಡಿಕೊಂಡು ಜೀವನಸಾರ್ಥಕತೆಯನ್ನು ಪಡ್ಕೊಳ್ತೀಯಾ...
ನಿಲ್ಲು ಸೋದರಿ...ಇಲ್ಲೊಮ್ಮೆ ಕೇಳು...

26 January 2010

ಬದಲಾವಣೆಯೊಂದಿಗೆ ಬದಲಾಗುತ್ತಾ...



ನಿತ್ಯ ಬರುವ ನಾಕಾರು forwarded ಮೆಸೇಜ್‌ಗಳು ಮನಸ್ಸಿಗೆ ಒಂದಷ್ಟು ಖುಷಿ, ನೆಮ್ಮದಿ ನೀಡ್ತವೆ. ಕೆಲವೊಂದಂತೂ ಮನಸ್ಸಿಗೆ ನಾಟಿ, ಹೊಸ ಉತ್ಸಾಹ ನೀಡ್ತವೆ, ಹೊಸ ಪ್ರೇರಣೆ ಕೊಡ್ತವೆ. ಹೀಗೇ ಗೆಳತಿಯೊಬ್ಬಳು ಕಳಿಸಿದ sms:
"Nothing can be changed by changing the face.. but, everything can be changed by facing the change."

ಹೌದಲ್ಲ! ಜೀವನದಲ್ಲಿ ಬದಲಾವಣೆಗಳು ಬಂದಾಗ ಒಮ್ಮೆಗೇ ಅದನ್ನು ಎದುರಿಸೋದಕ್ಕೆ ಮನಸ್ಸೇಕೋ ಹಿಂಜರಿಯುತ್ತೆ. ಯಾಕೆಂದ್ರೆ ನಾವು ಒಂದು mindsetಗೆ ಅಂಟಿಕೊಂಡಿರ್ತೇವೆ. ಅದು ಹಾಗೇನೇ ಆಗ್ಬೇಕು ಅಂತ ಬಲವಾಗಿ ಅಂದುಕೊಂಡಿರ್ತೇವೆ. ಹೀಗಿರೋವಾಗ ಏನಾದ್ರೂ ಸ್ವಲ್ಪ ಏರುಪೇರಾದ್ರೂ ವಿಪರೀತ ಪೇಚಾಡ್ತೇವೆ. ಆ ಬದಲಾವಣೆಗೆ ಹೊಂದಿಕೊಳ್ಳೋದಕ್ಕೆ ತುಂಬಾ ಕಷ್ಟವಾಗಿಬಿಡುತ್ತೆ. ಬೇಸರಮಾಡಿಕೊಂಡು ಮುಖಬಾಡಿಸಿಕೊಂಡು ಕೂತ್ರೆ ಏನು ಪ್ರಯೋಜನ?

ಅದ್ರ ಬದ್ಲು, ಬಂದ ಬದಲಾವಣೆಗೆ ಹೊಂದಿಕೊಂಡು ಅದಕ್ಕನುಗುಣವಾಗಿಯೇ ನಡ್ಕೊಂಡ್ರೆ ಆ ಬದಲಾವಣೆಯಲ್ಲೂ ಬದಲಾವಣೆ ತರ್ಬಹುದು. ಒಮ್ಮೆಗೇ ಆ ರೀತಿ ಬದಲಾಗುವುದು ಸ್ವಲ್ಪ ಕಷ್ಟವಾದೀತು. ಆದ್ರೂ ಪ್ರಯತ್ನಿಸ್ಬಹುದಲ್ವಾ..?

11 January 2010

ಸಂಬಂಧಗಳು...



ಈ ಸಂಬಂಧಗಳು ಅದೆಷ್ಟು ಸೂಕ್ಷ್ಮ!  ಸಣ್ಣ ರೇಷ್ಮೆ ಎಳೆಯಂತೆ.  ಒಂದೊಂದು ಎಳೆಯೂ ಅಷ್ಟೇ ಪ್ರಮುಖವೆನಿಸುತ್ತದೆ.  ಎಲ್ಲವೂ ಜೊತೆಸೇರಿ ಜೀವನದ ಹಂದರ ತಾನೆ?  ಬಿಗಿಯಾದರೆ ಅದೊಂದು ರೀತಿಯ ಚಡಪಡಿಕೆ.  ಇನ್ನು, ಸಡಿಲವಾಗಿ ಒಂದು ಎಳೆ ಕಡಿದು ಹೋದರೂ ಬಾಳೇ ನಶ್ವರವೇನೋ ಎಂಬ ಭಾವ.

ಸಂಬಂಧದ ಬಳ್ಳಿ ಕೇವಲ ಹುಟ್ಟಿನಿಂದ ಸುತ್ತಿಕೊಂಡು ಬಂದದ್ದು ಮಾತ್ರವಲ್ಲ.  ಜೀವನದ ಹಲವು ಹಂತಗಳಲ್ಲಿ ಬೆಸೆದುಕೊಂಡದ್ದೂ ಇರಬಹುದು.  ಕೆಲವೊಂದು ಬಾರಿ ರಕ್ತಸಂಬಂಧಿಗಳಲ್ಲಿರದಷ್ಟು ಪ್ರೀತಿ, ಮಮಕಾರ ಈ ಬಂಧುಗಳಲ್ಲಿ ಹೊಸೆದುಕೊಂಡಿರುತ್ತದೆ.  ಅವರೊಂದಿಗಿನ ಒಡನಾಟ ಒಡಹುಟ್ಟಿದವರಿಗಿಂತಲೂ ಹೆಚ್ಚು ಆತ್ಮೀಯತೆಯಿಂದಿರುತ್ತದೆ.  ಹೀಗಿರುವಾಗ, ಒಂದು ಸಣ್ಣ ವೈಮನಸ್ಸು ಮೂಡಿಬಿಟ್ಟರೆ, ಬದುಕನ್ನೇ ಕೊಚ್ಚಿಕೊಂಡು ಹೋಗುವಂಥ ದುಃಖ ಉಕ್ಕುಕ್ಕಿ ಬರುತ್ತದೆ.  ಅಂಥ ಸೆಳೆತವಿರುತ್ತದೆ ಅಲ್ಲಿ.

ಸಂಬಂಧಗಳನ್ನು ಮೊದಲಿನಿಂದ ಕೊನೆವರೆಗೂ ಜೋಪಾನವಾಗಿ, ಹಾಳಾಗದಂತೆ ನೋಡಿಕೊಳ್ಳುವುದೂ ಒಂದು ಕಲೆ.  ನೆಮ್ಮದಿಯ ಜೀವನಕ್ಕೆ ಅತೀ ಅಗತ್ಯವದು.  ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು.  ಅಣ್ಣನೊಂದಿಗಿನ ಬಾಂಧವ್ಯ, ತಮ್ಮನಿಗೆ ಬೇಸರ ತರಿಸುವಂತಿರಬಾರದು.  ನಮಗೆ ಎಲ್ಲರೂ ಬೇಕು ತಾನೆ?  ಹಾಗೆಯೇ ಅವರಿಗೂ ಕೂಡ.  ನಮ್ಮ ಒಂದು ಅನುಬಂಧ, ಇನ್ನೊಂದರ ಮನನೋಯಿಸುವಂತಿರಬಾರದು.  ಅವರು ನಮ್ಮ ಬಗ್ಗೆ ಗಮನಕೊಡದೇ ಇದ್ದಾಗ ನಮಗದೆಷ್ಟು ಬೇಸರವುಂಟಾಗುವುದೋ, ಅಷ್ಟೇ ಬೇಸರ ನಮ್ಮ ವೈಮನಸ್ಸಿನಿಂದಾಗಿ ಅವರಿಗೂ ಆದೀತು.  ಅವರು ನಮ್ಮವರು, ನಮ್ಮಂತೆಯೇ ಎಂಬ ಭಾವನೆ ನಮ್ಮಲ್ಲಿರಬೇಕು.  ಅದಕ್ಕೆ ತಕ್ಕಂತೆ ನಡೆದುಕೊಳ್ಳಲೂಬೇಕು.
ಇನ್ನೊಬ್ಬರಿಂದ ತಪ್ಪಾದಾಗ, ಮುನಿಸಿಕೊಂಡು ಮಾತುಬಿಟ್ಟು ಕೂತರೆ ಅದರಿಂದ ನಮಗೇ ತಾನೆ ನಷ್ಟ?  ಅವರೇ ಬಂದು ಕ್ಷಮೆ ಕೇಳಲಿ. . . ಎಂದು ಅಹಂ ಭಾವದಿಂದ ವರ್ತಿಸುವುದು ಮತ್ತೂ ದೊಡ್ಡ ತಪ್ಪೆನಿಸುವುದು.  ಒಂದು ಮಂದಹಾಸ ಬೀರುತ್ತಾ, ಪ್ರೀತಿಯಿಂದ, ಏನಾದರೂ ಸಮಸ್ಯೆ ಇದೆಯಾ. . . . ಅಂತೊಂದು ಮಾತು ಕೇಳಿದರೆ ಸಾಕು.  ಇನ್ನೇನು ಕೊನೆಗಾಣುವ ಸ್ಥಿತಿಯಲ್ಲಿದ್ದ ಸಂಬಂಧ, ಚಿಗುರಿಕೊಂಡು ಮತ್ತಷ್ಟು ಗಾಢವಾಗಿಬಿಡುತ್ತದೆ.  ಒಟ್ಟಿನಲ್ಲಿ ಸಂಬಂಧಗಳನ್ನು ಉಳಿಸಿಕೊಳ್ಳುವುದು ಅಥವಾ ಅಳಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.

05 January 2010

ಮೂರು ಹನಿಗಳು. . .



ಪುಟಾಣಿ ಹಕ್ಕಿ ಅಲ್ಲಿ
ತನ್ನ ಗೂಡಲ್ಲಿ
ಕಾಯುತಿಹುದು ಅಮ್ಮನಿಗಾಗಿ..
ಹಸಿದ ಹೊಟ್ಟೆಯ ಆರ್ತನಾದ
ಅದರ ಕರೆಯಲ್ಲಿ...

ರೆಕ್ಕೆ ಬಲಿತ ಹಕ್ಕಿ ಕಾಯುತಿಹುದು
ಆಚೆ ಊರಾಚೆ ಎಲ್ಲೆಗಳ ದಾಟಿ
ಹಾರಿ ಹೋಗಲು...
ಅಮ್ಮನ ಬೆಚ್ಚನೆಯ ಗೂಡ ತೊರೆಯಲು...
ನಾಳಿನ ಸುಂದರ ಕನಸುಗಳು
ಅದರ ಕಣ್ಮಿಂಚಲ್ಲಿ...

ಹಾರಿಹೋದ ಹಕ್ಕಿ ಕಾಯುತಿಹುದು
ಹುಡುಕಾಡುತಿಹುದು ಸಂಗಾತಿಗಾಗಿ
ನೋವು ನಲಿವ ಹಂಚಿಕೊಳ್ಳಲು...
ಪ್ರೀತಿ ತುಂಬಿದೊಂದು ಮನದ
ಒಲವ ಪಡೆವ
ಬಯಕೆ ಹೃದಯದಲ್ಲಿ...

29 December 2009

ಅಮ್ಮ 'ಹುಟ್ಟಿದ' ದಿನ...



ಏನಿವತ್ತು ತುಂಬಾ ಖುಷಿಯಾಗಿದೀರ! friend B'Day party ಇತ್ತಾ? ಜೋರಾ party? ಏನ್ gift ಕೊಟ್ರಿ? ಒಂದ್ನಿಮ್ಷ ತಡೀರಿ. ಸ್ವಲ್ಪ ಯೋಚ್ನೆ ಮಾಡಿ. ನಿಮ್ಮ ಪ್ರೀತಿಯ ಅಮ್ಮನ ಹುಟ್ಟಿದ ದಿನ ಯಾವಾಗ ಅಂತ ಗೊತ್ತಾ? ನೀವು ಮನೇಗ್ ಹೋದಾಗ್ಲೆಲ್ಲ ಹಬ್ಬದ ಅಡಿಗೆ ಮಾಡಿ, ಅದಕ್ಕೊಂದಷ್ಟು ಪ್ರೀತಿ ಬೆರೆಸಿ ಉಣಬಡಿಸಿ, ಆ ಅಮ್ಮ ಪ್ರತಿ ಸಾರಿ ನೀಡೊ partyಗೆ ಇದು ಸಾಟಿನಾ?

ಚಿಕ್ಕೋರಿದ್ದಾಗ "ಚಾಕ್ಲೇಟ್ ತಗೋ ಪುಟ್ಟಾ" ಅಂತ ಅದೆಲ್ಲೋ ಸಣ್ ಡಬ್ಬದಲ್ಲಿ ಎತ್ತಿಟ್ಟಿದ್ದ ಎರಡು ರೂಪಾಯಿ ಕೊಟ್ಟಿದ್ಳಲ್ಲ ಅಮ್ಮ. ಅವಳಿಗೆ ಅದೇನು gift ಕೊಟ್ಟಿದೀರಿ? ಅದು ಹೋಗ್ಲಿ ಬಿಡಿ. ಮುಂಜಾನೆ ಬೇಗ ಎದ್ದು ಅಡಿಗೆ ಮನೇನಲ್ಲಿ ಬ್ಯುಸಿಯಾಗಿರೋ ಅಮ್ಮನ ಬೆನ್ನಹಿಂದಿಂದ ಸದ್ದಿಲ್ಲದೆ ಹೋಗಿ, "happy B'day ಅಮ್ಮಾ" ಅಂತ ಒಂದೇ ಒಂದು ಮಾತು ಹೇಳಿ, ಅಮ್ಮನ ಪ್ರತಿಕ್ರಿಯೆ ನೋಡಿದ್ದೀರ? ಖಂಡಿತ ಆಗ ಅಮ್ಮನ ಹೃದಯ ಅದೆಷ್ಟು ಖುಷಿ ಪಡ್ಬಹುದು ಅಲ್ವಾ?

ಹೌದು. ಮರೀಬೇಡಿ. ಇನ್ಮುಂದೆ ಪ್ರತಿ ವರ್ಷನೂ friends B'dayಗೆ reminder ಇಡೋ ಥರಾ ಅಮ್ಮಂದಕ್ಕೂ ಇಡ್ತೀರಲ್ಲ? ಅಮ್ಮನ ಕಂಗಳಲ್ಲಿನ ಮಾಸದ ಹೊಳಪು ಮತ್ತಷ್ಟು ಹೊಳೆಯೋದನ್ನು ಮಿಸ್ ಮಾಡ್ಕೊಳ್ಳೋಲ್ಲ ಅಲ್ವ?

22 December 2009

ಎಲ್ಲೆಲ್ಲೂ ಇರುವವಗೆ...



ಭೂರಮೆಯ ಸ್ಪರ್ಶಿಸುವ
ಹನಿ ಹನಿಯ ದನಿಯೊಳಗೆ
ತುಂಬು ಕಾನನದ
ಎಲೆ ಎಲೆಯ ನೆಲೆಯೊಳಗೆ
ಕತ್ತಲಿನಾಗಸದ
ಚುಕ್ಕಿ ಚುಕ್ಕಿಯ ತೆಕ್ಕೆಯೊಳಗೆ
ನಶ್ವರ ದೇಹದ
ಕಣ ಕಣದ ಉಸಿರೊಳಗೆ
ಸದಾ ನೆಲೆಸಿರುವ ನಿನಗೆ
ಮನದಾಳದ ನುಡಿನಮನ
ಸಲಹು ಸರ್ವರನು ಅನವರತ. . .

16 December 2009

ಮನಸ್ಸು...



ಅಲ್ಲೊಂದು ಪುಟ್ಟ ಹಕ್ಕಿ.
ಕೂತಲ್ಲಿ ಕೂರದೆ,ಆ ಕೊಂಬೆಯಿಂದ ಈ ಕೊಂಬೆಗೆ ಹಾರಿ,ಅಂಗಳದಲ್ಲಿ ಅದೇನೋ ಕಾಳು ಕಂಡಂತಾಗಿ ಅದರತ್ತ ನೆಗೆದು,ಅತ್ತಿತ್ತ ತಲೆಯಾಡಿಸಿ,ಸುತ್ತಮುತ್ತ ಕಣ್ಣುಹಾಯಿಸಿ,ಅತ್ತಲಿಂದ ಯಾರೋ ಬರುತ್ತಿರುವುದ ಕಂಡು ಮತ್ತೆ ಮತ್ತೊಂದು ಮರದ ಕೊಂಬೆಗೇರಿ...- ಹೀಗೆ ಎಡೆಬಿಡದೆ ಚುರುಕಾಗಿ ಹಾರಾಡುತ್ತಿತ್ತು. ಐದು ನಿಮಿಷಗಳಲ್ಲಿ ಒಂದು ಇಪ್ಪತ್ತು ಬಾರಿ ಅತ್ತಿತ್ತ ಹಾರಿತ್ತೇನೊ...ಹಾಗೇ ಯೋಚಿಸ್ತಾ ಇದ್ದೆ. ಹೌದಲ್ವ, ಈ ಹಕ್ಕಿ ನಮ್ಮ ಮನಸ್ಸಿನ ಪ್ರತಿರೂಪದಂತೆ ಕಾಣ್ಸುತ್ತಲ್ಲ? ನಿಂತಲ್ಲಿ ನಿಲ್ಲದು,ಕೂತಲ್ಲಿ ಕೂರದು ಈ ಚಂಚಲ ಮನಸ್ಸು. ದೂರದಲ್ಲೆಲ್ಲೋ ಕಾಣುವ ಒಂದು ಪುಟ್ಟ ಬಯಕೆಯ ಕುಡಿಗಾಗಿ ಮಿಡಿದು,ಅದನ್ನು ಪಡೆಯಹೊರಡುತ್ತದೆ. ಒಂದು ಸಣ್ಣ ಅಡ್ಡಿ ಬಂದರೂ ಅದೇನೋ ತಳಮಳದಿಂದ ಹಿಂಜರಿದುಬಿಡುತ್ತದೆ. ಆದರೂ ಆಸೆ ಬಿಡಬೇಕಲ್ಲ...ಮತ್ತೆ ಅದಕ್ಕಾಗಿಯೇ ಪ್ರಯತ್ನ. ಹೀಗೆ ಸಣ್ಣ-ಪುಟ್ಟದಕ್ಕೆ ಆಸೆಪಟ್ಟು ಮುಗಿಬೀಳುವ ಹೊತ್ತಲ್ಲಿ ಕಳೆದುಕೊಳ್ಳುವ ದೊಡ್ಡ ದೊಡ್ಡ ಅವಕಾಶಗಳು ಅವೆಷ್ಟೊ! ದಿನನಿತ್ಯ ಇದೇ ಕಾಯಕ.

ಆದರೂ ಅಲ್ಲೇನೋ ಒಂದು ವಿಶೇಷ ಉತ್ಸಾಹ ಇದೆ. ಪೆಟ್ಟುಬಿದ್ದರೂ ಮತ್ತೆ ಪುಟಿದೇಳುವ ಸಾಮರ್ಥ್ಯ ಇದೆ. ಈ ಸಾಮರ್ಥ್ಯದ ಅರಿವು ಮಾತ್ರ ಕೆಲವೊಮ್ಮೆ ಸ್ವಲ್ಪ ಮರೆಯಾಗಿಬಿಡುತ್ತದೆ. ಆಗಲೇ ಬಂದುಬಿಡುತ್ತದೆ ನೋಡಿ,ಖಿನ್ನತೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಸಂದರ್ಭದಲ್ಲಿ ಇದಕ್ಕೊಳಗಾಗಿಯೇ ಆಗುತ್ತಾರೆ. ಆಗಲೂ ಬೇಕು. ಹಾಗೆ ಆಗಿ,ಅದನ್ನು ಈಸಿದಾಗ ನಮ್ಮಲ್ಲೊಂದು ದೃಢತೆ, ಆತ್ಮಸ್ಥೈರ್ಯ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ.

ಹೇಳುತ್ತಾರೆ ಹಲವರು,ಮನಸ್ಸನ್ನು ನಿಯಂತ್ರಣದಲ್ಲಿರಿಸುವುದು ಬಹಳ ಕಷ್ಟ,ಯೋಗಿಗಳಿಂದ ಮಾತ್ರ ಅದು ಸಾಧ್ಯ ಅಂತ. ಹೌದೇನು? ನಮ್ಮಿಂದ ಸಾಧ್ಯವಿಲ್ವೇನು? ಸಾಧ್ಯವಿಲ್ದೇ ಇದ್ದಿದ್ರೆ ನಾವು ಇಷ್ಟು ಬೆಳೀತಿದ್ವ? ಯಾವುದೋ ಹಾಳುಕೊಂಪೆಯಲ್ಲಿ ಯಾರಿಗೂ ಬೇಡದವರಾಗಿ,ನಿಷ್ಕ್ರಿಯರಾಗಿರ್ತಿದ್ವಿ,ಅಲ್ವ?

ಹುಂ,ವಿಚಾರಲಹರಿ ಎಲ್ಲಿಂದಲೋ ಹೊರಟು,ಎಲ್ಲಿಗೋ ತಲುಪ್ತು. ಏನೇ ಹೇಳಿ, ಈ 'ಮನಸ್ಸು' ಅನ್ನೋದೊಂದು ಬಹಳ ಕುತೂಹಲಕರ ಸಂಗತಿ..!
ಅದರೊಳಗೊಂದು ಗಾಢ ನಿಗೂಢತೆಯಿದೆ..!

01 December 2009

ನಿರೀಕ್ಷೆ - ನಿರಾಸೆ



ಸ್ನೇಹಿತ್ರೆ, ಬಹಳಷ್ಟು ಬಾರಿ ಹೀಗಾಗುವುದಿದೆ. ಹಂಬಲಿಸಿ, ಹಂಬಲಿಸಿ ಇನ್ನೇನು ನಮ್ಮ ಕೈಗೆ ಸಿಕ್ಕೇ ಬಿಟ್ಟಿತು ಅಂದಾಗ, ಅದೆಲ್ಲಿಂದಲೋ ಬರಸಿಡಿಲೆರಗಿ ಅದನ್ನು ನಮ್ಮಿಂದ ದೂರ, ದೂರ ಮತ್ತೆ ಬರದಷ್ಟು 'ದೂರ'ದತ್ತ ದೂರಮಾಡಿಬಿಡುತ್ತದೆ. ಯಾಕೆ ಹಾಗಾಗುತ್ತೆ? "ಛೆ, ನನ್ಗೇ ಹೀಗಾಗ್ಬೇಕಾ?" ಅಂತನ್ನುವ ವೇದನೆ. ವಾಸ್ತವ ಅಂದ್ರೆ, ಆ ರೀತಿ ಆದವರು, ಅಂದುಕೊಂಡವರು ಬಹಳಷ್ಟು ಜನ ಇರ್ತಾರೆ. ನಮ್ಮ ಗಮನಕ್ಕೆ ಬಂದಿರೊಲ್ಲ ಅಷ್ಟೆ. ನಮ್ಗೆ ಮಾತ್ರ ಹೀಗಾಗಿದೆ ಅಂತಂದ್ಕೊಳ್ತೇವೆ.


ಆದ್ರೂ ಅಂಥ ಒಂದು ನೋವು ಮನಸ್ಸಿಗೆ ತೀರಾ ನಾಟುವಂಥದ್ದು, ಅಲ್ವ? ದೈಹಿಕ ಗಾಯಗಳು ಹೇಗೋ ವಾಸಿಯಾದಾವು, ಆದ್ರೆ ಮಾನಸಿಕವಾಗಿ ಘಾಸಿಯಾದದ್ದು. . .?

ಏನೋ ಒಂದು 'ಮ್ಯಾಜಿಕ್' ನಡೀಬಹುದೇನೊ. . . ಬಯಸಿದ್ದ ನಿರೀಕ್ಷೆಗಳು ಮತ್ತೆ ಎದ್ದು ಬರದಂತೆ ಸತ್ತು ಬಿದ್ದಿದ್ರೂ, ಮಾಯೆಯಿಂದ ಮೆಲ್ಲನೆ ಚಿಗುರಿ ಬಂದು ಮನಸ್ಸಿಗೆ ಮುದ ನೀಡೀತೇನೋ... - ಎಂದೆಲ್ಲ ಹುಚ್ಚು ಯೋಚನೆಗಳು. ಅದೆಲ್ಲ ಅಸಾಧ್ಯವೆಂದರಿವಿದ್ದರೂ, ಆ ರೀತಿಯ ಕಲ್ಪನೆಗಳೇ ಒಂದು ರೀತಿ ಮುದ ನೀಡುತ್ತವೆ. ಅವುಗಳ ಆಧಾರದಲ್ಲೇ ಬದುಕು ಸವೆಯುತ್ತದೆ, ಸಾವಕಾಶವಾಗಿ.

ಸ್ನೇಹಿತ್ರೆ ಒಮ್ಮೆ ಯೋಚ್ನೆ ಮಾಡಿ, ಯಾಕಾಗುತ್ತೆ ಇಂಥ ನಿರಾಸೆಗಳು..? ಏನನ್ನೋ ತುಂಬಾ ನಿರೀಕ್ಷಿಸಿದ್ವಿ. ಅದು ಆಗ್ಲಿಲ್ಲ ಅಂತ ತಾನೆ? ಹೌದು, ನಿರಾಸೆಗೆ ಕಾರಣ ನಮ್ಮ ನಿರೀಕ್ಷೆ. ನಮ್ಮ expectation ಜಾಸ್ತಿ ಆದ ಹಾಗೆ ನಿರಾಸೆಗಳೂ ಜಾಸ್ತಿಯಾಗ್ತವೆ. ಜೀವನದಲ್ಲಿ ನನ್ನನ್ನೂ ಸೇರಿದಂತೆ ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಕಲಿಯುವ ದೊಡ್ಡ ಪಾಠ- ನಿರೀಕ್ಷೆಯೇ ನಿರಾಸೆಯ ಮೂಲ ಅಂತ. ಹಾಗಂತ ಏನನ್ನೂ ನಿರೀಕ್ಷಿಸದೇ ಹೇಗೆ ಜೀವನ ನಡೆಸೋದು? ಯಾವ್ದೇ ಕೆಲ್ಸ ಆದ್ರೂ ಒಂದು ನಿರೀಕ್ಷೆ ಇಲ್ದಿದ್ರೆ ಅದನ್ನು ಮಾಡೋದಕ್ಕೆ ಮನಸ್ಸು ಬರುತ್ತಾ? - ಅಂತೆಲ್ಲ ಪ್ರಶ್ನೆಗಳು ಮೂಡ್ಬಹುದು. ಒಂದು ಅಂಶ ನಾವು ಗಮನಿಸ್ಬೇಕಾದ್ದು, ಏನಂದ್ರೆ, ಈ ನಿರೀಕ್ಷೆ ಬೇರೆ, ಆಕಾಂಕ್ಷೆ ಬೇರೆ. ನಮ್ಗೆ ಯಶಸ್ಸು ಸಿಗ್ಬೇಕಂದ್ರೆ ನಾವೊಂದು ಮಹತ್ವಾಕಾಂಕ್ಷೆ ಹೊಂದಿರ್ಬೇಕು. ಅದಿದ್ದಾಗ ಕೆಲ್ಸ ಮಾಡೋ ಉತ್ಸಾಹ ತನ್ನಿಂತಾನೇ ಬಂದ್ಬಿಡುತ್ತೆ. ಮಹತ್ವಾಕಾಂಕ್ಷೆಯನ್ನು ಈಡೇರ್ಸಿಕೊಳ್ಳೋದು ನಮ್ಮ ಕೈಯಲ್ಲೇ ಇದೆ. ಆದ್ರೆ 'ನಿರೀಕ್ಷೆ' ಅನ್ನೋದು ಹಾಗಲ್ಲ. ಇನ್ನೊಬ್ಬರಿಂದ ಬರೋಂಥದ್ದನ್ನು ನಾವು ನಿರೀಕ್ಷೆ ಮಾಡೋದು ಅಷ್ಟೆ. ಏನೋ ಒಂದು ಅನಿರೀಕ್ಷಿತವಾಗಿ ಆಯ್ತು ಅಂದ್ರೆ ಅದ್ರಲ್ಲಿ ಸಿಗೋ ಖುಷಿ ಮತ್ತೆಲ್ಲೂ ಸಿಗೊಲ್ಲ ಅಲ್ವ. ವಿಪರ್ಯಾಸ ಏನಂದ್ರೆ ನಾವು ಆ ಅನಿರೀಕ್ಷಿತವನ್ನೇ ನಿರೀಕ್ಷೆ ಮಾಡ್ತೇವೆ.

ಮಾನಸಿಕ ಸಂಘರ್ಷಗಳಿಗೆ ಕೊನೆಯಿಲ್ಲ, ಉಸಿರಿರುವವರೆಗೆ.

24 November 2009

'ಆ ಒಂದು understandig. . .'



"ನಂಗೊಂದು ಪೆನ್ನು ತರ್ತೀನಂತ ಹೇಳಿದ್ದೆ. . ತಂದ್ಯಾ ಅಮ್ಮ. . ?"
"ನಂಗೆ ನಿನ್ನಲ್ಲಿರೋ ಹಳೇ ಹಾಡುಗಳನ್ನು ಕೊಡ್ತೀನಂತ ಹೇಳಿದ್ದೆ. . . ತಂದ್ಯೇನೆ. . ?"
"ಮೊನ್ನೆ ಪತ್ರಿಕೇನಲ್ಲಿ ನನ್ನ ಲೇಖನ ಬಂದಿತ್ತೂಂದ್ನಲ್ಲ. . ಓದಿದ್ರಾ. .?"

- ಇವೆಲ್ಲ ನಮ್ಮ ಪ್ರೀತಿಪಾತ್ರರು ಪ್ರೀತಿಯಿಂದ ಕೇಳುವ, ಕೇಳಿದಷ್ಟೂ ಬಾರಿ ನಾವು "ಅಯ್ಯೋ ಮರ್ತೇ ಹೋಯ್ತು. . " ಅಂತ ಉತ್ತರಿಸೋ ಸಾಮಾನ್ಯ ಪ್ರಶ್ನೆಗಳು.

ನಾವು ಯಾರ್‍ಯಾರದ್ದೋ ಕೆಲಸಗಳನ್ನು ಮಾಡಿಕೊಡ್ತೇವೆ, ಯಾವ್ಯಾವುದನ್ನೋ ಸರಿಯಾಗಿ ನೆನಪಿಟ್ಟು ಎಚ್ಚರವಹಿಸಿ ಮಾಡಿಪೂರೈಸ್ತೇವೆ.  ಆದ್ರೆ. . . ನಮ್ಮವರ ಪ್ರೀತಿಯ ಪುಟ್ಟ ಪುಟ್ಟ ಆಸೆಗಳನ್ನು ಪೂರೈಸೋದಕ್ಕೆ ಮರೆತೇ ಬಿಡ್ತೇವೆ.

ಅದೆಂಥಾ ನಿರ್ಲಕ್ಷ್ಯವೋ ದೇವರೇ ಬಲ್ಲ. ಅಥವಾ ಅವರೆಲ್ಲಾ ನಮ್ಮವರೇ ತಾನೇ. .  ಇವತ್ತಲ್ಲದಿದ್ರೆ ನಾಳೆ ಮಾಡಿದ್ರಾಯ್ತು. . ನಾಳೆ ನೆನಪಾದೀತು. . ಎಂಬ ಭಾವವೋ. .  ಅಂತೂ ಕಾಯ್ತಾ ಕೂತವರು ಕಾದೇ ಬಾಕಿ.

ನಾವು ಎಷ್ಟೇ ಕಾಯ್ಸಿದ್ರೂ ಆ ಸುಂದರ ಅನುಬಂಧದಲ್ಲಿ ಎಳ್ಳಷ್ಟೂ ಬಿರುಕು ಬರದು ನೋಡಿ, ಅದು ಮೆಚ್ಚುವಂಥದ್ದು ಅಲ್ವ? ನಾಳೆ ಮತ್ತೆ ಅಷ್ಟೇ ಪ್ರೀತಿಯಿಂದ ಅದೇ ಪ್ರಶ್ನೆಗಳು ಎದುರಾಗುತ್ತವೆ. ನಿರಾಸೆಯಾದರೂ ತೋರ್ಪಡಿಸದೆ ಒಂದು ನಿಡಿದಾದ ಉಸಿರಲ್ಲಿ ವಿಷಯಕ್ಕೆ ಪೂರ್ಣವಿರಾಮ ಹಾಕಿಬಿಡುತ್ತಾರೆ. ಬೇರೆ ಏನೆಲ್ಲ ಸಮಸ್ಯೆಗಳಿವೆಯೋ ಏನೋ. . ಇರ್ಲಿ. . ನೆನಪಾದೀತು ಒಂದು ದಿನ. . ಎಂಬ ಸಮಾಧಾನ ತನ್ನಷ್ಟಕ್ಕೇ ಬಂದುಬಿಡುತ್ತದೆ.

ಅಂತಹ ಒಂದು understanding ನಿಂದಲೇ ತಾನೆ, ಈ ಜೀವನ ಸುಗಮವಾಗಿ ನಡೀತಿರೋದು. . ?